ADVERTISEMENT

ಸಚಿವರ ಕಾರ್ಯಕ್ಷಮತೆ ಪರಾಮರ್ಶೆಗೆ ಮಂತ್ರಿ ಮಂಡಲ ಸಭೆ ಕರೆದಿರುವ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 14:20 IST
Last Updated 18 ಡಿಸೆಂಬರ್ 2019, 14:20 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಪೂರ್ಣ ಮಂತ್ರಿ ಮಂಡಲದ ಸಭೆ ಕರೆದಿದ್ದಾರೆ. ಈ ಸಂದರ್ಭದಲ್ಲಿ ಸಚಿವರ ಕಾರ್ಯಕ್ಷಮತೆಯನ್ನು ಪ್ರಧಾನಿ ಅವರು ಪರಾಮರ್ಶೆ ಮಾಡುವ ನಿರೀಕ್ಷೆ ಇದೆ.

ವಿಶೇಷವಾಗಿ ವಸತಿ ಯೋಜನೆ, ಜಲ ಜೀವನ್‌ ಮಿಷನ್‌, ಉಜ್ವಲ್‌ ಯೋಜನಾ ಸೇರಿದಂತೆ ತಮ್ಮ ಸರ್ಕಾರ ಕೈಗೊಂಡ ಮಹತ್ವದ ಯೋಜನೆಗಳ ಸಾಧನೆಯ ಬಗ್ಗೆ ಪರಿಶೀಲಿಸುವ ಸಾಧ್ಯತೆಗಳಿವೆ.

ಸಭೆಯನ್ನು ರಾಜಧಾನಿಯಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ಗರ್ವಿ ಗುಜರಾತ್‌ ಭವನದಲ್ಲಿ ಕರೆಯಲಾಗಿದ್ದು, ಬಿಜೆಪಿಯ ಕೆಲವು ಹಿರಿಯ ನಾಯಕರು ಭಾಗವಹಿಸುವ ಸಾಧ್ಯತೆಗಳಿವೆ. ಕೇಂದ್ರ ಸಚಿವ ಸಂಪುಟದ ಪುನರ್‌ರಚಿಸುವ ನಿಟ್ಟಿನಲ್ಲೂ ಈ ಸಭೆ ಮಹತ್ವ ಪಡೆದಿದೆ ಎನ್ನಲಾಗಿದೆ. ಮುಂದಿನ ತಿಂಗಳು ಸಚಿವ ಸಂಪುಟದ ಪುನರ್ ರಚಿಸುವ ಸಾಧ್ಯತೆಗಳಿವೆ.

ADVERTISEMENT

ಈ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಸ್ಟಾರ್ಟ್‌ ಅಪ್‌ಗಳ ಪ್ರಗತಿ ಕುರಿತು ವಿವರ ನೀಡಲಿದ್ದಾರೆ.

ಎರಡನೇ ಅವಧಿಗೆ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಮಂತ್ರಿ ಮಂಡಲದ ಸಭೆ ಕರೆದು, ಮುಂದಿನ ಐದು ವರ್ಷಗಳ ಅಭಿವೃದ್ಧಿಯ ಮುನ್ನೋಟವನ್ನು ಬಿಚ್ಚಿಟ್ಟಿದ್ದರು. ಎರಡನೇ ಅವಧಿಯು ಇನ್ನು ಕೆಲವೇ ದಿನಗಳಲ್ಲಿ ಆರು ತಿಂಗಳು ಪೂರ್ಣಗೊಳಿಸುತ್ತಿರುವುದರಿಂದ ಪ್ರಧಾನಿ ಸಚಿವರ ಸಾಧನೆಯ ಪರಾಮರ್ಶೆ ನಡೆಸಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.