ಲಕ್ನೊ: ‘ಕಬ್ಬು ಬೆಳೆಗಾರರ ಬಾಕಿ ಪಾವತಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹಣವಿಲ್ಲ, ಆದರೆ, ವಿಶ್ವ ಪ್ರವಾಸ ಮಾಡಲು ಎರಡು ವಿಮಾನಗಳನ್ನು ಖರೀದಿಸಲು ಅವರಲ್ಲಿ ಹಣವಿದೆ’ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಲೇವಡಿ ಮಾಡಿದ್ದಾರೆ.
ಉತ್ತರದ ಪ್ರದೇಶದ ಬಿಜನೋರ್ ಜಿಲ್ಲೆಯಲ್ಲಿ ಸೋಮವಾರ ಪಕ್ಷ ಆಯೋಜಿಸಿದ್ದ ‘ಕಿಸಾನ್ ಮಹಾಸಭಾ’ದಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು.
ದೇಶದ ರೈತರ ಕಬ್ಬಿನ ₹15 ಸಾವಿರ ಕೋಟಿಯನ್ನು ಬಾಕಿ ಉಳಿಸಿಕೊಂಡು, ಇನ್ನೂ ಪಾವತಿಸುತ್ತಿಲ್ಲ. ಆದರೆ, ಮೋದಿಯವರ ವಿಶ್ವ ಪ್ರವಾಸಕ್ಕೆ ಸುಮಾರು ₹16 ಸಾವಿರ ಕೋಟಿ ಮೊತ್ತದ ಎರಡು ವಿಮಾನಗಳನ್ನು ಸರ್ಕಾರ ಖರೀದಿಸಿದೆ. ಕಳೆದ ಎರಡು ಚುನಾವಣೆಗಳಲ್ಲಿ ಮೋದಿಯವರು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸದೆ, ಜನರ ನಂಬಿಕೆಗೆ ದ್ರೋಹಬಗೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
‘ಮೋದಿಜೀಯವರು ನೀಡಿದ ಭರವಸೆಗಳನ್ನು ನಂಬಿದ ದೇಶದ ಜನತೆ ಅವರನ್ನು ಎರಡು ಬಾರಿ ಬೆಂಬಲಿಸಿದರು. ಆದರೆ, ಮೋದಿಜೀಯವರು ಜನತೆಯ ನಂಬಿಕೆಯನ್ನು ಹುಸಿಗೊಳಿಸಿಬಿಟ್ಟರು’ ಎಂದು ದೂರಿದರು.
ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳು ರೈತರ ಮರಣಶಾಸನ ಬರೆಯುವಂತಿವೆ ಎಂದು ಟೀಕಿಸಿದ ಪ್ರಿಯಾಂಕಾ, ‘ದೇವರುಗಳನ್ನು ಮಾರಾಟ ಮಾಡುವವರಿಗೆ ಮನುಷ್ಯರ ಬದುಕಿನ ಬೆಲೆ ಗೊತ್ತಾಗುವುದಿಲ್ಲ. ಹಾಗಾಗಿ ಕಬ್ಬು ಬಾಕಿ ಪಾವತಿಸದವರಿಗೆ ಜೀವನದ ಬೆಲೆಯೂ ಗೊತ್ತಾಗುತ್ತಿಲ್ಲ’ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಜನ ಸಾಮಾನ್ಯರ ಲೂಟಿ: ರಾಹುಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.