ADVERTISEMENT

ಪ್ರಧಾನಿ ಮೋದಿ ಜಾತ್ಯತೀತ ತತ್ವದ ಪ್ರತಿರೂಪ: ನಖ್ವಿ

ಪಿಟಿಐ
Published 4 ಏಪ್ರಿಲ್ 2021, 9:58 IST
Last Updated 4 ಏಪ್ರಿಲ್ 2021, 9:58 IST
ಮುಖ್ಯಾರ್‌ ಅಬ್ಬಾಸ್‌ ನಖ್ವಿ
ಮುಖ್ಯಾರ್‌ ಅಬ್ಬಾಸ್‌ ನಖ್ವಿ   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತ ತತ್ವಗಳ ಬಗ್ಗೆ ನಾವು ಹೊಂದಿರುವ ಬದ್ಧತೆಯ ಪ್ರತಿರೂಪವಾಗಿದ್ದಾರೆ’ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಭಾನುವಾರ ಹೇಳಿದರು.

ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ಮತಗಳನ್ನು ಒಡೆಯುವುದೇ ಕಾಂಗ್ರೆಸ್‌ ಪಾಲಿಗೆ ಜಾತ್ಯತೀತತೆ’ ಎಂದು ಟೀಕಿಸಿದರು.

‘ಬಿಜೆಪಿಯೇ ನಿಜವಾದ ಜಾತ್ಯತೀತ ಪಕ್ಷ. ವಿಧಾನಸಭೆ ಚುನಾವಣೆಗಳಲ್ಲಿ ಮುಸ್ಲಿಮರು ಸಹ ಪ್ರಧಾನಿ ಮೋದಿ ಅವರಿಗೆ ಬೆಂಬಲಿಸುತ್ತಿರುವುದನ್ನು ನೋಡುತ್ತಿದ್ದೇವೆ. ನಿಧಾನವಾಗಿ ಅವರೂ ಬಿಜೆಪಿಗೆ ಸೇರುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷ ಅಸ್ಸಾಂನಲ್ಲಿ ಬದ್ರುದ್ದೀನ್‌ ಅಜ್ಮಲ್‌ ನೇತೃತ್ವದ ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ ಜೊತೆ ಮೈತ್ರಿ ಮಾಡಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಇಂಡಿಯನ್‌ ಸೆಕ್ಯುಲರ್ ಫ್ರಂಟ್‌ ಜೊತೆ ಹಾಗೂ ಕೇರಳದಲ್ಲಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಜೊತೆ ಕೈಜೋಡಿಸಿದೆ. ಇದು ಕಾಂಗ್ರೆಸ್‌ ಅನುಸರಿಸಿಕೊಂಡು ಬರುತ್ತಿರುವ ಜಾತ್ಯತೀತ ಹಣೆಪಟ್ಟಿ ಅಂಟಿಸಿದ ಕೋಮುವಾದ ನೀತಿಯನ್ನು ಬಹಿರಂಗಪಡಿಸಿದೆ’ ಎಂದರು.

‘ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲಿದೆ. ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಉತ್ತಮ ಸಾಧನೆ ಮಾಡುವುದು. ತಮ್ಮ ಸೋಲು ಖಚಿತ ಎಂಬುದನ್ನು ಗ್ರಹಿಸಿರುವ ವಿರೋಧ ಪಕ್ಷಗಳು, ಇವಿಎಂಗಳ ಕಾರ್ಯಕ್ಷಮತೆ ಪ್ರಶ್ನಿಸುವುದು, ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸುವುದನ್ನು ಆರಂಭಿಸಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.