ನವದೆಹಲಿ: ಯುವ ಜನರು ಮತ್ತು ಮಕ್ಕಳಲ್ಲಿ ಕೋವಿಡ್ ಹರಡುವಿಕೆ ಮತ್ತು ಅದರ ತೀವ್ರತೆಯನ್ನು ದಾಖಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಸಣ್ಣ ಪ್ರಮಾಣದಲ್ಲಿ ಉಳಿದರೂ ಕೋವಿಡ್ನ ಸವಾಲು ದೇಶದ ಮುಂದೆ ಇದ್ದೇ ಇರುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೋವಿಡ್ನ ಅತಿ ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಎರಡನೇ ಸಭೆಯನ್ನು ಮೋದಿ ಅವರು ಗುರುವಾರ ನಡೆಸಿದರು. ವೈರಾಣುವಿನ ರೂಪಾಂತರದಿಂದಾಗಿ ಯುವ ತಲೆಮಾರಿನಲ್ಲಿ ಕೂಡ ಸೋಂಕು ಹರಡುತ್ತಿರುವುದರ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು. ಯುವ ಜನರಲ್ಲಿನ ಸೋಂಕಿನ ಅಂಕಿಅಂಶಗಳನ್ನು ವಿಶ್ಲೇಷಿಸಬೇಕು. ಆ ಮೂಲಕ ಭವಿಷ್ಯದಲ್ಲಿ ಸೋಂಕನ್ನು ಎದುರಿಸಲು ಸಜ್ಜಾಗಬೇಕು ಎಂದು ಅವರು ಕರೆ ಕೊಟ್ಟರು.
ಕಳೆದ ಕೆಲವು ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಹಾಗಿದ್ದರೂ ಜನರು ಕೋವಿಡ್ ತಡೆ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆಯೇ ಇನ್ನು ಚಿಂತೆಯ ಅಗತ್ಯವಿಲ್ಲ ಎಂದು ಜನರು ಭಾವಿಸುತ್ತಾರೆ ಎಂದು ಕಳೆದ ಒಂದೂವರೆ ವರ್ಷದ ಅನುಭವವನ್ನು ಉಲ್ಲೇಖಿಸಿ ಮೋದಿ ಹೇಳಿದರು.
ಕೋವಿಡ್ ನಿಯಂತ್ರಣವು ಆಡಳಿತ ವ್ಯವಸ್ಥೆ, ಸಾಮಾಜಿಕ ಸಂಘಟನೆಗಳು ಮತ್ತು ಚುನಾಯಿತ ಪ್ರತಿನಿಧಿಗಳ ಸಾಮೂಹಿಕ ಹೊಣೆಗಾರಿಕೆ ಎಂದರು.
***
ಧೂರ್ತ ಮತ್ತು ಬಹುರೂಪಿಯಾಗಿರುವ ವೈರಾಣುವನ್ನು ಎದುರಿಸಲು ಹೊಸ ಕಾರ್ಯತಂತ್ರಗಳು ಮತ್ತು ವಿನೂತನ ಪರಿಹಾರಗಳು ಬೇಕು.
- ನರೇಂದ್ರ ಮೋದಿ, ಪ್ರಧಾನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.