ADVERTISEMENT

ಮೋದಿ ತಾಯಿ ನಿಧನ: ದ್ರೌಪದಿ ಮುರ್ಮು, ಅಮಿತ್ ಶಾ, ಸೋನಿಯಾ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2022, 3:38 IST
Last Updated 30 ಡಿಸೆಂಬರ್ 2022, 3:38 IST
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ (ಪಿಟಿಐ ಚಿತ್ರ)
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ (ಪಿಟಿಐ ಚಿತ್ರ)   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ಅವರ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಸಂತಾಪ ಸೂಚಿಸಿದ್ದಾರೆ.ಅವರ ತ್ಯಾಗದ ಜೀವನವು ಯಾವಾಗಲೂ ಸ್ಮರಣೀಯವಾದ್ದು ಎಂದು ಹೇಳಿದ್ದಾರೆ.

ಶತಾಯುಷಿ ಹೀರಾಬೆನ್‌(100) ಅವರು ಅನಾರೋಗ್ಯದಿಂದಾಗಿ ಶುಕ್ರವಾರಬೆಳಗಿನ ಜಾವ 3.39ಕ್ಕೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನುಅಹಮದಾಬಾದ್‌ನಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆ್ಯಂಡ್‌ ರೀಸರ್ಚ್‌ ಸೆಂಟರ್‌ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.

ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇಮೋದಿ ಅವರು ಗುಜರಾತ್‌ಗೆ ಆಗಮಿಸಿದ್ದಾರೆ.

ಹೀರಾಬೆನ್‌ ನಿಧನದ ಕುರಿತು ಟ್ವೀಟ್‌ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು,ಮೋದಿ ಅವರ ತಾಯಿ ಹೀರಾಬೆನ್‌ ಅವರ ನೂರು ವರ್ಷಗಳ ಹೋರಾಟದ ಬದುಕು, ಭಾರತೀಯ ಆದರ್ಶಗಳ ಪ್ರತಿರೂಪ. ಮೋದಿ ಅವರು'ಮಾತೃದೇವೋಭವ' ಮತ್ತು ಹೀರಾಬೆನ್‌ ಅವರ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.

ಅಮಿತ್ ಶಾ, 'ಕುಟುಂಬದ ಪೋಷಣೆಗಾಗಿ ಹೀರಾಬೆನ್‌ ಎದುರಿಸಿದ ಸಂಘರ್ಷ ಎಲ್ಲರಿಗೂ ಮಾದರಿಯಾಗಿದೆ. ಆಕೆಯ ತ್ಯಾಗದಿಂದ ಕೂಡಿದ ಅವರ ತಪಸ್ವೀ ಜೀವನವು ಸದಾ ನಮ್ಮ ನೆನಪಿನಲ್ಲಿ ಉಳಿಯಲಿದೆ.ಈ ದುಃಖದ ಸಮಯದಲ್ಲಿ ಇಡೀ ದೇಶವು ಪ್ರಧಾನಿ ಮೋದಿ ಮತ್ತು ಅವರ ಕುಟುಂಬದೊಂದಿಗೆ ನಿಂತಿದೆ. ಕೋಟಿ ಕೋಟಿ ಜನರ ಪ್ರಾರ್ಥನೆ ನಿಮ್ಮೊಂದಿಗಿದೆ (ಮೋದಿ ಅವರೊಂದಿಗೆ ಇದೆ). ಓಂ ಶಾಂತಿ' ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರ ತಾಯಿಯ ನಿಧನದಿಂದ ತುಂಬಾ ದುಃಖಿತನಾಗಿದ್ದೇನೆ.ಪೂಜ್ಯ ಹೀರಾ ಬಾ ಅವರು ಉದಾರತೆ, ಸರಳತೆ, ಕಠಿಣ ಪರಿಶ್ರಮ ಮತ್ತು ಉನ್ನತ ಜೀವನ ಮೌಲ್ಯಗಳ ಪ್ರತಿರೂಪವಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಹೀರಾಬೆನ್‌ ಮೋದಿ ಅವರ ನಿಧನ ಸುದ್ದಿ ಕೇಳಿ ಸಂಕಟವಾಯಿತು.ಪ್ರೀತಿಯ ತಾಯಿಯನ್ನು ಕಳೆದುಕೊಂಡಿರುವ ನರೇಂದ್ರ ಮೋದಿ ಅವರಿಗೆ ಸಂತಾಪಗಳನ್ನು ಸೂಚಿಸುತ್ತೇನೆ. ಈ ದುಃಖದ ಸಮಯದಲ್ಲಿ ನಾವೆಲ್ಲ ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಬರೆದುಕೊಂಡಿದ್ದಾರೆ.

ಮೋದಿ ಅವರ ತಾಯಿಯ ನಿಧನದ ದುಃಖದ ಸುದ್ದಿ ಗೊತ್ತಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈನೋವಿನ ಸಂದರ್ಭದಲ್ಲಿ ಮೋದಿಯವರು ಮತ್ತು ಅವರ ಕುಟುಂಬದವರಿಗೆ ದೇವರು ಧೈರ್ಯ ನೀಡಲಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್‌ ಸೇರಿದಂತೆ ಮತ್ತಷ್ಟು ನಾಯಕರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.