ADVERTISEMENT

ಸಾವರ್ಕರ್ ಜನ್ಮದಿನ: ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಗೌರವ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2022, 5:55 IST
Last Updated 28 ಮೇ 2022, 5:55 IST
ವಿನಾಯಕ ದಾಮೋದರ್ ಸಾವರ್ಕರ್
ವಿನಾಯಕ ದಾಮೋದರ್ ಸಾವರ್ಕರ್    

ನವದೆಹಲಿ: ವಿನಾಯಕ ದಾಮೋದರ್ ಸಾವರ್ಕರ್ ಅವರ ಜನ್ಮ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

‘ತಾಯಿ ಭಾರತಿಯ ವೀರ ಪುತ್ರ ವೀರ ಸಾವರ್ಕರ್ ಅವರಿಗೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ರಾಷ್ಟ್ರೀಯತೆ, ಸ್ವಾತಂತ್ರ್ಯದ ಪ್ರತೀಕ ವೀರ ಸಾವರ್ಕರ್ ಅವರ ಜನ್ಮದಿನದಂದು ಅವರಿಗೆ ನಮನಗಳು. ದೇಹದ ಪ್ರತಿ ಕಣದಲ್ಲೂ ದೇಶಪ್ರೇಮ ಉರಿಸಿ ದೇಶಕ್ಕಾಗಿ ಬದುಕಬಹುದು ಎಂಬುದಕ್ಕೆ ಸಾವರ್ಕರ್ ಅವರ ಜೀವನ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಅವರ ತ್ಯಾಗದ ಜೀವನ ನಮಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತಲೇ ಇರುತ್ತದೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಸಾವರ್ಕರ್ ಅವರು ಒಂದೇ ಜೀವನದಲ್ಲಿ ಎರಡು ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾದರು ಹಾಗೂ ಬಂದೀಖಾನೆಯ ಅಮಾನವೀಯ ಚಿತ್ರಹಿಂಸೆಗಳನ್ನು ಅನುಭವಿಸಿದರು. ಆದರೆ, ತಾಯಿ ಭಾರತಿಯನ್ನು ವೈಭವದ ಉತ್ತುಂಗಕ್ಕೆ ಕರೆದೊಯ್ಯುವ ಅವರ ಸಂಕಲ್ಪವನ್ನು ತಡೆಯಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ಚಳವಳಿಗೆ ಅವರು ನೀಡಿದ ಅಪ್ರತಿಮ ಕೊಡುಗೆ ಮತ್ತು ಸಮಾಜದಿಂದ ಅಸ್ಪೃಶ್ಯತೆ ತೊಡೆದುಹಾಕಲು ಅವರು ಮಾಡಿದ ಪ್ರಯತ್ನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅಮಿತ್ ಶಾ ಉಲ್ಲೇಖಿಸಿದ್ದಾರೆ.

‘ವೀರ ಸಾವರ್ಕರ್ ಅವರು ಧೈರ್ಯ, ಸಂಕಲ್ಪ ಮತ್ತು ತ್ಯಾಗದ ಪ್ರತಿರೂಪ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ವಹಿಸಿದ ಪರಿಣಾಮಕಾರಿ ಪಾತ್ರ ಸ್ಫೂರ್ತಿದಾಯಕವಾಗಿದೆ. ಅವರ ಇಡೀ ಜೀವನ ದೇಶ ಮತ್ತು ಸಮಾಜ ಸೇವೆಗೆ ಮುಡಿಪಾಗಿತ್ತು. ಅಂತಹ ವೀರ ಸಾವರ್ಕರ್ ಜನ್ಮದಿನದಂದು ನಾನು ಅವರಿಗೆ ನಮಸ್ಕರಿಸುತ್ತೇನೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

‘ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಪ್ರಖರ ವಾಗ್ಮಿ, ಕವಿ, ದಿವಂಗತ ವಿನಾಯಕ ದಾಮೋದರ್ ಸಾವರ್ಕರ್ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ವೀರ ಸಾವರ್ಕರ್ ಅವರ ಹೋರಾಟದ ಬದುಕು ಭಾರತೀಯರಿಗೆ ಸ್ಫೂರ್ತಿಯ ಸೆಲೆಯಾಗಿದೆ’ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.