ತಿರುವನಂತಪುರ: ಪ್ರತಿಯೊಬ್ಬರಿಗೂ ಅಭಿವೃದ್ಧಿ ಎಂಬುದೇ ನಮ್ಮ ಸರ್ಕಾರದ ಗುರಿ ಮತ್ತು ಧರ್ಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕೇರಳದಲ್ಲಿ ಪ್ರಮುಖ ಯೋಜನೆಗಳಿಗೆ ಶುಕ್ರವಾರ ಶಂಕುಸ್ಥಾಪನೆ ಹಾಗೂ ಕೆಲವು ಯೋಜನೆಗಳ ಉದ್ಘಾಟನೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ನೆರವೇರಿಸಿದ್ದಾರೆ. ಬಳಿಕ ಮಾತನಾಡಿ, ‘ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕೆ ಜಾತಿ, ಧರ್ಮ, ಜನಾಂಗ, ಪಂಥ, ಲಿಂಗ, ಭಾಷೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.
‘ನಾನು ನಿಮ್ಮ ಜಾತಿ ಕೇಳುತ್ತಿಲ್ಲ ಸಹೋದರಿ, ನಾನು ಬಾಯಾರಿದ್ದೇನೆ, ನೀರು ಕೇಳುತ್ತಿದ್ದೇನೆ’ ಎಂಬ ಮಲಯಾಳದ ಖ್ಯಾತ ಕವಿ ಕುಮಾರನ್ ಆಶಾನ್ ಅವರ ಪ್ರಸಿದ್ಧ ಹೇಳಿಕೆಯನ್ನೂ ಮೋದಿ ಉಲ್ಲೇಖಿಸಿದ್ದಾರೆ.
ಅಭಿವೃದ್ಧಿಯೇ ನಮ್ಮ ಗುರಿ, ಅದುವೇ ನಮ್ಮ ಧರ್ಮ. ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’, ಇದು ಎಲ್ಲರಿಗೂ ಅಭಿವೃದ್ಧಿ ಎಂಬುದರ ಮೂಲ ಆಶಯ ಎಂದು ಮೋದಿ ಹೇಳಿದ್ದಾರೆ.
ಒಗ್ಗಟ್ಟು ಮತ್ತು ಅಭಿವೃದ್ಧಿ ದೃಷ್ಟಿಕೋನವನ್ನು ಅರಿತುಕೊಂಡು ಬೆಂಬಲಿಸಿ ಎಂದು ಮೋದಿ ಮನವಿ ಕೇರಳದ ಜನರಲ್ಲಿ ಮಾಡಿದ್ದಾರೆ.
320 ಕೆವಿ ಸಾಮರ್ಥ್ಯದ ಪುಗಲೂರು–ತ್ರಿಶೂರ್ ವಿದ್ಯುತ್ ಪ್ರಸರಣ ಯೋಜನೆಯನ್ನು ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.
ರಾಷ್ಟ್ರೀಯ ಸೌರಶಕ್ತಿ ಮಿಷನ್ ಅಡಿ ಕಾಸರಗೋಡಿನಲ್ಲಿ ಅಭಿವೃದ್ಧಿಪಡಿಸಿದ 50 ಮೆಗಾವಾಟ್ ಸಾಮರ್ಥ್ಯದ ಸೌರಶಕ್ತಿ ಯೋಜನೆಯನ್ನೂ ಮೋದಿ ಉದ್ಘಾಟಿಸಿದ್ದಾರೆ. ಅರುವಿಕ್ಕರದಲ್ಲಿ ಮೃತ್ ಮಿಷನ್ ಅಡಿ ನಿರ್ಮಿಸಲಾಗಿರುವ ಬಹುನಿರೀಕ್ಷಿತ 75 ಎಂಎಲ್ಡಿ (ಮಿಲಿಯನ್ ಲೀಟರ್ಸ್ ಪರ್ ಡೇ) ಸಾಮರ್ಥ್ಯದ ನೀರು ಸಂಸ್ಕರಣಾ ಘಟಕವನ್ನೂ ಪ್ರಧಾನಿ ಉದ್ಘಾಟಿಸಿದ್ದಾರೆ.
ತಿರುವನಂತಪುರದ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ಸೆಂಟರ್ ಹಾಗೂ ಸ್ಮಾರ್ಟ್ ರೋಡ್ಸ್ ಯೋಜನೆಗೂ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.