ನವದೆಹಲಿ: ಜನರಿಗೆ ಕೋವಿಡ್ ತಡೆ ಲಸಿಕೆಯನ್ನು ಅತ್ಯಂತ ತ್ವರಿತವಾಗಿ ಹಾಕಿಸಲು ಸರ್ಕಾರವು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಸಿಕೆ ಕೊರತೆಯಿಂದಾಗಿ ದೇಶದೆಲ್ಲೆಡೆ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿರುವ ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದಾರೆ.
ಅವರು ರೈತರನ್ನು ಉದ್ದೇಶಿಸಿವಿಡಿಯೊ ಕಾನ್ಫರೆನ್ಸ್ ಮೂಲಕ ಶುಕ್ರವಾರ ಮಾತನಾಡಿದರು.
‘ನೂರು ವರ್ಷಗಳ ಬಳಿಕ ಸಾಂಕ್ರಾಮಿಕವು ಜಗತ್ತನ್ನು ಪರೀಕ್ಷೆಗೆ ಒಡ್ಡಿದೆ. ಅಗೋಚರ ಶತ್ರು ನಮ್ಮ ಮುಂದೆ ಇದೆ. ಪ್ರೀತಿಪಾತ್ರರಾದ ಹಲವ ರನ್ನು ಈ ಶತ್ರುವಿನಿಂದಾಗಿ ನಾವು ಕಳೆದು ಕೊಂಡಿದ್ದೇವೆ. ನೀವು ಅನುಭವಿಸಿದ ನೋವು ನಿಮ್ಮ ಪ್ರಧಾನ ಸೇವಕನಾದ ನನಗೆ ಅರ್ಥವಾಗುತ್ತದೆ’ ಎಂದು ಪ್ರಧಾನಿ ಹೇಳಿದ್ದಾರೆ.
ಕೋವಿಡ್ನಿಂದ ರಕ್ಷಣೆ ಪಡೆಯಲು ಇರುವ ಅತ್ಯುತ್ತಮ ಮಾರ್ಗ ಲಸಿಕೆ ಹಾಕಿಸಿಕೊಳ್ಳುವುದೇ ಆಗಿದೆ ಎಂದು ಹೇಳಿದ ಅವರು, ತಮ್ಮ ಸರದಿ ಬಂದಾಗ ಜನರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕೋರಿದರು.
ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಜನರಿಗೆ ಕೋವಿಡ್ ಲಸಿಕೆಗಳು ಲಭ್ಯವಾಗುವುದನ್ನು ಖಾತರಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿ ದ್ದಾರೆ. ಆದರೆ, ಲಸಿಕೆಗಳ ಕೊರತೆ ಯಿಂದಾಗಿ ಹಲವು ರಾಜ್ಯಗಳು ಲಸಿಕೆ ನೀಡಿಕೆಯನ್ನು ಮುಂದೂಡಿವೆ ಮತ್ತು ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಮೊರೆಹೋಗಿವೆ.
ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ತೀವ್ರವಾಗಿ ಹರಡುತ್ತಿರುವು ದರ ಬಗ್ಗೆ ಮೋದಿ ಅವರು ಜನರಿಗೆ ಎಚ್ಚರಿಕೆ ನೀಡಿದರು.
ಪಂಚಾಯಿತಿ ರಾಜ್ ಸಂಸ್ಥೆಗಳು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಯ್ದುಕೊಳ್ಳಬೇಕು ಮತ್ತು ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.