ADVERTISEMENT

ಆಚಾರ್ಯ ವಿನೋಬಾ ಭಾವೆ, ಸ್ವಾಮಿ ವಿವೇಕಾನಂದರ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

ಏಜೆನ್ಸೀಸ್
Published 11 ಸೆಪ್ಟೆಂಬರ್ 2020, 5:52 IST
Last Updated 11 ಸೆಪ್ಟೆಂಬರ್ 2020, 5:52 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಆಚಾರ್ಯ ವಿನೋಬಾ ಭಾವೆ ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಮಾನವ ಸಮುದಾಯ ಕಲಿಯಬೇಕಾದ ಬಹಳಷ್ಟು ಸಂಗತಿಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಇಂದು, ಅಂದರೆ ಸೆಪ್ಟೆಂಬರ್ 11 ಭಾರತದ ಪಾಲಿಗೆ ಎರಡು ಮಹತ್ವದ ಮೈಲಿಗಲ್ಲು ದಾಖಲಾದ ದಿನ. ಒಂದು ಆಚಾರ್ಯ ವಿನೋಬಾ ಭಾವೆ ಅವರ ಜಯಂತಿ. ಮತ್ತೊಂದು ಸ್ವಾಮಿ ವಿವೇಕಾನಂದರು ಷಿಕಾಗೊದಲ್ಲಿ ಭಾಷಣ ಮಾಡಿದ ದಿನ. ಇಬ್ಬರೂ ಮಹಾನ್ ವ್ಯಕ್ತಿಗಳ ಚಿಂತನೆಗಳಿಂದ ಮಾನವ ಸಮುದಾಯ ಕಲಿಯಬೇಕಾದ ಬಹಳಷ್ಟು ಸಂಗತಿಗಳಿವೆ ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಭೂದಾನ ಚಳವಳಿಯ ಪ್ರಮುಖರಾಗಿರುವ ಭಾವೆ ಅವರ 125ನೇ ಜಯಂತಿ ಇಂದು. ಮತ್ತೊಂದೆಡೆ, 1893ರಂದು ಇದೇ ದಿನ ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ್ದರು.

ಮಹಾತ್ಮ ಗಾಂಧಿ ಮತ್ತು ಭಾವೆ ಅವರ ಒಡನಾಟದ ಬಗ್ಗೆ ಉಲ್ಲೇಖಿಸಿರುವ ಮೋದಿ, 1918ರಲ್ಲಿ ವಿನೋಬಾ ಭಾವೆ ಅವರ ಬಗ್ಗೆ ಬಾಪು ಹೀಗೆ ಬರೆದಿದ್ದರು – ‘ಯಾವ ಪದಗಳಿಂದ ನಿಮ್ಮನ್ನು ಹೊಗಳಬೇಕು ಎಂಬುದು ನನಗೆ ತಿಳಿಯುತ್ತಿಲ್ಲ. ನಿಮ್ಮ ಪ್ರೀತಿ ಮತ್ತು ವ್ಯಕ್ತಿತ್ವ ನನ್ನನ್ನು ಆಕರ್ಷಿಸಿದೆ. ನಿಮ್ಮ ಮೌಲ್ಯವನ್ನು ತುಲನೆ ಮಾಡಲು ನಾನು ಯೋಗ್ಯನಲ್ಲ’. ಇಂಥ ವಿನೋಬಾ ಭಾವೆ ಅವರಿಗೆ 125ನೇ ಜಯಂತಿ ಸಂದರ್ಭದಲ್ಲಿ ಪ್ರಣಾಮಗಳು ಎಂದು ಹೇಳಿದ್ದಾರೆ.

‘1893ರಲ್ಲಿ ವಿವೇಕಾನಂದರು ಮಾಡಿದ್ದ ಭಾಷಣವು ಭಾರತದ ಮಣ್ಣಿನ ಅವಿಭಾಜ್ಯ ಅಂಗವಾಗಿರುವ ಸಂಸ್ಕೃತಿ, ನೀತಿ, ಮೌಲ್ಯಗಳನ್ನು ಜಗತ್ತಿಗೆ ಸಾರಿತ್ತು. ಅವರ ಭಾಷಣದ ಪಠ್ಯವನ್ನು ಓದಬೇಕೆಂದು ಯುವಕರನ್ನು ಒತ್ತಾಯಿಸುತ್ತೇನೆ’ ಎಂದು ಭಾಷಣದ ಪ್ರತಿ ಸಹಿತ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.