ಉದ್ಧವ್ ಠಾಕ್ರೆ
ಮುಂಬೈ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣೇಶ ಹಬ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡದ್ದು ಶಿಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಶಿವಸೇನಾ (ಯುಬಿಟಿ) ಶುಕ್ರವಾರ ಹೇಳಿದೆ.
ಸಿಜೆಐ ನಿವಾಸಕ್ಕೆ ಮೋದಿ ಅವರು ಬುಧವಾರ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದು ಪರ–ವಿರೋಧ ಚರ್ಚೆಗೆ ಕಾರಣವಾಗಿತ್ತು. ‘ಪ್ರಧಾನಿ ಮತ್ತು ಸಿಜೆಐ ನಡುವಣ ಖಾಸಗಿ ಭೇಟಿಯು ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಏಳುವಂತೆ ಮಾಡಿದೆ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಹೇಳಿದೆ.
ಮೋದಿ ಅವರನ್ನು ಆಹ್ವಾನಿಸುವ ಚಂದ್ರಚೂಡ್ ನಿರ್ಧಾರವನ್ನೂ ಟೀಕಿಸಿದ್ದು, ‘ನಿವೃತ್ತಿಯ ಬಳಿಕ ಚಂದ್ರಚೂಡ್ ಅವರಿಗೆ ಮೋದಿ ಅವರು ಯಾವ ಸ್ಥಾನಮಾನ ನೀಡುವರು ಎಂಬುದು ಕುತೂಹಲದ ವಿಷಯ’ ಎಂದಿದೆ. ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ, ಚಂದ್ರಚೂಡ್ ಅವರು ಈ ವರ್ಷದ ನವೆಂಬರ್ 10ರಂದು ನಿವೃತ್ತಿ ಹೊಂದಲಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ‘ತುಳಿಯುವ’ ಕೆಲಸದಲ್ಲಿ ಸರ್ಕಾರಕ್ಕೆ ಸಹಾಯ ಮಾಡಿದ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಒಳ್ಳೆಯ ಸ್ಥಾನಮಾನ ನೀಡಲಾಗಿದೆ ಎಂದು ಟೀಕಿಸಿದೆ.
ಆದರೆ ಚಂದ್ರಚೂಡ್ ಅವರ ಬಗ್ಗೆ ವಿಭಿನ್ನ ದೃಷ್ಟಿಕೋನವಿತ್ತು ಹಾಗೂ ಈಗಲೂ ಇದೆ. ಏಕೆಂದರೆ ಅವರ ಕುಟುಂಬವು ನ್ಯಾಯ ನೀಡುವ ಪರಂಪರೆಯನ್ನು ಹೊಂದಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ತಂದೆ ಕೂಡಾ ಸಿಜೆಐ ಆಗಿದ್ದರು ಎಂದು ಹೇಳಿದೆ.
ಚಂದ್ರಚೂಡ್ ಅವರು ಮಹಾರಾಷ್ಟ್ರದ ಮಗನಾಗಿರುವುದರಿಂದ ಯಾವುದೇ ರಾಜಕೀಯ ಪ್ರಭಾವಕ್ಕೆ ಮಣಿಯುವುದಿಲ್ಲ ಎಂಬ ಬಲವಾದ ನಂಬಿಕೆ ಇದೆ ಎಂದು ಸಂಪಾದಕೀಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.