ADVERTISEMENT

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌; ಇಬ್ಬರು ಕಾರ್ಯ ನಿರ್ವಾಹಕ ನಿರ್ದೇಶಕರ ವಜಾ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ನೀರವ್ ಮೋದಿ ವಂಚನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 20:30 IST
Last Updated 20 ಜನವರಿ 2019, 20:30 IST

ನವದೆಹಲಿ: ಉದ್ಯಮಿ ನೀರವ್ ಮೋದಿಯಿಂದ ವಂಚನೆಗೆ ಒಳಗಾಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಕಾರ್ಯ ಚಟುವಟಿಕೆಯನ್ನು ಸಮರ್ಪಕವಾಗಿ ನಿಭಾಯಿಸಲು ವಿಫಲಗೊಂಡ ಆರೋಪದ ಮೇಲೆ ಬ್ಯಾಂಕಿನ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರನ್ನು ಕೇಂದ್ರ ಸರ್ಕಾರ ವಜಾಗೊಳಿಸಿದೆ.

ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ವಿ.ಬ್ರಹ್ಮಾಜಿ ರಾವ್‌ ಹಾಗೂ ಸಂಜೀವ್‌ ಶರನ್ ಅವರನ್ನು ಜ. 18ರಂದು ವಜಾ ಮಾಡಲಾಗಿದ್ದು, ಹಣಕಾಸು ಸಚಿವಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

ಬ್ರಹ್ಮಾಜಿ ರಾವ್‌ ಈ ತಿಂಗಳು ನಿವೃತ್ತರಾಗಲಿದ್ದರೆ, ಶರನ್‌ ಅವರ ಅಧಿಕಾರಾವಧಿ ಮೇನಲ್ಲಿ ಪೂರ್ಣಗೊಳ್ಳುತ್ತಿತ್ತು.

ADVERTISEMENT

ವಿಶ್ವದ ವಿವಿಧ ಬ್ಯಾಂಕುಗಳಲ್ಲಿ ನಡೆಯುವ ಹಣಕಾಸು ವ್ಯವಹಾರದ ವಿವರಗಳನ್ನು (ಸ್ವಿಫ್ಟ್‌) ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯೊಂದಿಗೆ ಜೋಡಿಸಬೇಕು ಎಂದು ಆರ್‌ಬಿಐ 2016ರಲ್ಲಿ ನಿರ್ದೇಶನ ನೀಡಿ, ಸುತ್ತೋಲೆ ಹೊರಡಿಸಿತ್ತು. ಕೆಲವು ಬ್ಯಾಂಕುಗಳು ಈ ನಿರ್ದೇಶನವನ್ನು ಅನುಷ್ಠಾನಕ್ಕೆ ತಂದಿದ್ದವು. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸೇರಿದಂತೆ ಇನ್ನೂ ಕೆಲವು ಬ್ಯಾಂಕುಗಳು ಅನುಷ್ಠಾನಕ್ಕೆ ತಂದಿರಲಿಲ್ಲ.

ಬ್ಯಾಂಕಿನ ಈ ಇಬ್ಬರು ಕಾರ್ಯ ನಿರ್ವಾಹಕ ನಿರ್ದೇಶಕರು ಆರ್‌ಬಿಐ ನಿರ್ದೇಶನವನ್ನು ಕಡೆಗಣಿಸಿದ್ದರು ಎಂದು ಆರೋಪಿಸಲಾಗಿದೆ.

ಅಲಹಾಬಾದ್‌ ಬ್ಯಾಂಕಿನ ಹಿರಿಯ ಅಧಿಕಾರಿ ಉಷಾ ಅನಂತಸುಬ್ರಮಣಿಯನ್‌ ಅವರನ್ನು ಸರ್ಕಾರ ಕಳೆದ ವರ್ಷ ಆಗಸ್ಟ್‌ನಲ್ಲಿ ವಜಾ ಮಾಡಿತ್ತು. ಅಲಹಾಬಾದ್‌ ಬ್ಯಾಂಕ್‌ನಲ್ಲಿ ಉನ್ನತ ಹುದ್ದೆ ಸ್ವೀಕರಿಸುವುದಕ್ಕೂ ಮುನ್ನ ಉಷಾ ಅವರು ಪಿಎನ್‌ಬಿಯಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಒ ಆಗಿದ್ದರು. ನೀರವ್‌ ಮೋದಿ ಹಾಗೂ ಇತರರಿಂದ ಬ್ಯಾಂಕಿಗೆ ಆಗಿರುವ ವಂಚನೆಯನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದರು ಎಂಬ ಆರೋಪ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.