ADVERTISEMENT

ಶ್ರದ್ಧಾ ಹತ್ಯೆ ಪ್ರಕರಣ: ಸಾಕ್ಷ್ಯ ಸಂಗ್ರಹಕ್ಕಾಗಿ ಆಫ್ತಾಬ್ ಕಚೇರಿ ಪರಿಶೀಲನೆ

ದೆಹಲಿ ಪೊಲೀಸರಿಂದ ತನಿಖೆ ಮುಂದುವರಿಕೆ

ಪಿಟಿಐ
Published 26 ನವೆಂಬರ್ 2022, 11:31 IST
Last Updated 26 ನವೆಂಬರ್ 2022, 11:31 IST
ಅಫ್ತಾಬ್‌ ಅಮೀನ್‌ ಪೂನಾವಾಲಾ (ಇನ್‌ಸ್ಟಾಗ್ರಾಮ್‌ ಚಿತ್ರ)
ಅಫ್ತಾಬ್‌ ಅಮೀನ್‌ ಪೂನಾವಾಲಾ (ಇನ್‌ಸ್ಟಾಗ್ರಾಮ್‌ ಚಿತ್ರ)   

ನವದೆಹಲಿ: ಶ್ರದ್ಧಾ ವಾಲಕರ್‌ ಹತ್ಯೆಯ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುವ ಸಲುವಾಗಿ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕೆಲಸ ಮಾಡುತ್ತಿದ್ದ ಗುರುಗ್ರಾಮದಲ್ಲಿರುವ ಖಾಸಗಿ ಸಂಸ್ಥೆಯ ಕಚೇರಿಗೆ ಭೇಟಿ ನೀಡಿತ್ತು ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

‘ಶ್ರದ್ಧಾಳ ದೇಹದ ತುಂಡುಗಳು, ಕೊಲೆಗೆ ಬಳಸಿದ್ದ ಆಯುಧ ಅಥವಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯಲ್ಲಿ ನಿರ್ಣಾಯಕವಾಗಬಹುದಾದ ಯಾವುದಾದರೂ ಸಾಕ್ಷ್ಯವನ್ನು ಆರೋಪಿ ಕಚೇರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಸೆದಿದ್ದಾನೆಯೇ ಎಂಬುದನ್ನು ತಿಳಿಯಲು ಶೋಧ ನಡೆಸಲಾಯಿತು’ ಎಂದೂ ಅಧಿಕಾರಿ ತಿಳಿಸಿದ್ದಾರೆ.

ಕಚೇರಿ ಸಮೀಪದಲ್ಲಿನ ಪೊದೆಯಲ್ಲಿ ಪತ್ತೆಯಾದ ಕೆಲವು ವಸ್ತುಗಳನ್ನು ಪೊಲೀಸರು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ವಶಪಡಿಸಿಕೊಂಡಿದ್ದಾರೆ. ಆದರೆ, ಬ್ಯಾಗ್‌ನಲ್ಲಿರುವ ವಸ್ತುಗಳನ್ನು ಬಹಿರಂಗಪಡಿಸಿಲ್ಲ.

ADVERTISEMENT

ಹಲವು ಸ್ಥಳಗಳಿಗೆ ಪ್ರಯಾಣಿಸಿದ್ದ ಜೋಡಿ
ಮುಂಬೈ ಅನ್ನು ತೊರೆದ ಬಳಿಕ ಶ್ರದ್ಧಾ ಮತ್ತು ಅಫ್ತಾಬ್ ಹಲವು ಸ್ಥಳಗಳಿಗೆ ಪ್ರಯಾಣಿಸಿದ್ದರು.ಕೊಲೆಗೆ ಪ್ರಚೋದನೆ ನೀಡಲು ಆ ಪ್ರವಾಸಗಳಲ್ಲಿ ಏನಾದರೂ ಸಂಭವಿಸಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಆಫ್ತಾಬ್‌ನೊಂದಿಗೆ ಈ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಹಾಗಾಗಿ, ಅಫ್ತಾಬ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು ಇನ್ನೂ ಐದು ದಿನಗಳ ಕಾಲ ದೆಹಲಿ ನ್ಯಾಯಾಲಯವು ವಿಸ್ತರಿಸಿದೆ.

‌ಶ್ರದ್ಧಾ ಮತ್ತು ಅಫ್ತಾಬ್ಮುಂಬೈನಿಂದ ದೆಹಲಿಗೆ ಸ್ಥಳಾಂತರಗೊಂಡ ಬಳಿಕ ಅಫ್ತಾಬ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

5 ದಿನಗಳೊಳಗೆ ಮಂಪರು ಪರೀಕ್ಷೆ ನಡೆಸಲು ಕೋರ್ಟ್ ಸೂಚನೆ
ನವದೆಹಲಿ (ಪಿಟಿಐ): ‘
ಶ್ರದ್ಧಾ ಹತ್ಯೆಯ ಅರೋಪಿ ಅಫ್ತಾಬ್ ಅಮಿನ್ ಪೂನಾವಾಲಾಗೆ ಐದು ದಿನಗಳೊಳಗೆ ಮಂಪರು ಪರೀಕ್ಷೆ ನಡೆಸಬೇಕು. ಆದರೆ, ಆತನಿಗೆ ಯಾವುದೇ ರೀತಿಯ ಚಿತ್ರಹಿಂಸೆ ನೀಡಬಾರದು’ ಎಂದು ದೆಹಲಿ ನಗರ ಪೊಲೀಸರಿಗೆ ದೆಹಲಿ ಕೋರ್ಟ್ ನಿರ್ದೇಶನ ನೀಡಿದೆ.

ದೆಹಲಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ವಿಜಯಶ್ರೀ ರಾಥೋಡ್ ಅವರು, ದೆಹಲಿಯ ಉಪನಗರ ರೋಹಿಣಿಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ತನಿಖಾಧಿಕಾರಿಗೆ (ಇಒ) ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.