ADVERTISEMENT

ಧ್ವನಿ ದಮನ ಯತ್ನ: ವಿದ್ಯಾರ್ಥಿಗಳ ಆರೋಪ

ಏಜೆನ್ಸೀಸ್
Published 25 ಡಿಸೆಂಬರ್ 2019, 20:18 IST
Last Updated 25 ಡಿಸೆಂಬರ್ 2019, 20:18 IST
   

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದೆಹಲಿ ಪೊಲೀಸರು ಕಣ್ಗಾವಲು ಇರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿರುವವರನ್ನು ಪೊಲೀಸರು ಗಮನಿಸುತ್ತಿದ್ದು, ಯಾರ್‍ಯಾರ ಮೇಲೆ ಕಣ್ಗಾವಲು ಇಡಬೇಕು ಎಂಬ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದಾರೆ’ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದಾದ ಬಳಿಕ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಮತ್ತು ತಮ್ಮ ಊರಿಗೆ ಮರಳುವಂತೆ ದೆಹಲಿಯ ಪಿ.ಜಿ ಹಾಸ್ಟೆಲ್‌ಗಳಲ್ಲಿ ಉಳಿದಿರುವ ವಿದ್ಯಾರ್ಥಿ
ಗಳಿಗೆ ಪೊಲೀಸರು ಬೆದರಿಕೆ ಹಾಕುತ್ತಿದ್ದ ವಿಡಿಯೊ ಒಂದು ಬುಧವಾರ ಜಾಲತಾಣಗಳಲ್ಲಿ ಓಡಾಡಿದೆ. ಇದು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಭಯಮೂಡಿಸಲು ಕಾರಣವಾಗಿದೆ. ಆದರೆ, ‘ಇದು ತಿರುಚಿದ ವಿಡಿಯೊ’ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಈ ನಡುವೆ, ಅಹಮದಾಬಾದ್‌ನ ನಿರ್ಮಾ ವಿಶ್ವವಿದ್ಯಾಲಯದ ಕಾನೂನು ವಿದ್ಯಾಲಯವು ‘ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ಹೆಸರು ಪೊಲೀಸರ ದಾಖಲೆಗಳಲ್ಲಿ ಸೇರುವ ಸಾಧ್ಯತೆ ಇದೆ’ ಎಂದು ಪಾಲಕರಿಗೆ ಪತ್ರ ಮುಖೇನ ತಿಳಿಸಿದೆ.

‘ನಾವು ಇಂಥ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.