ADVERTISEMENT

ಪ್ರವಾಹಕ್ಕೆ ಕುಸಿದ ಸಂಪರ್ಕ ರಸ್ತೆ: ರಾಜಕೀಯ ಮುಖಂಡರ ವಾಗ್ವಾದ

ಪಿಟಿಐ
Published 16 ಜುಲೈ 2020, 21:29 IST
Last Updated 16 ಜುಲೈ 2020, 21:29 IST
ಮಳೆಯಿಂದ ಕುಸಿದಿರುವ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ – ಪಿಟಿಐ ಚಿತ್ರ
ಮಳೆಯಿಂದ ಕುಸಿದಿರುವ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ – ಪಿಟಿಐ ಚಿತ್ರ   

ಪಟ್ನಾ: ಕಳೆದ ತಿಂಗಳಷ್ಟೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ್ದ ನೂತನ ಸತ್ತರ್‌ಘಾಟ್‌ ಸೇತುವೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದ್ದ ರಸ್ತೆಯು ಪ್ರವಾಹದಿಂದಾಗಿಈಗ ಕೊಚ್ಚಿಹೋಗಿದೆ. ಇದು, ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ರಸ್ತೆ ಕುಸಿದಿರುವ ಚಿತ್ರವನ್ನು ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌, ‘₹100 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆಗೆ ಇಷ್ಟು ಬೇಗ ಹಾನಿಯಾಗಿದೆ. ಇದನ್ನು ಉದ್ಘಾಟಿಸಿದ ಮುಖ್ಯಮಂತ್ರಿ ನಿತೀಶ್‌ಕುಮಾರ್ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ

ತೇಜಸ್ವಿ ಯಾದವ್ ಹೇಳಿಕೆಗೆ ಜೆಡಿಯು, ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದ್ದು, ‘ವಿರೋಧ ಪಕ್ಷದ ಮುಖಂಡರಾಗಿ ಇಂತಹಬೇಜವಾಬ್ದಾರಿ ಹೇಳಿಕೆಯನ್ನು ಹೇಗೆ ನೀಡುತ್ತಿದ್ದೀರಿ. ಸೇತುವೆ ಮತ್ತು ಸಂಪರ್ಕ ರಸ್ತೆ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲವೇ?’ ಎಂದಿದ್ದಾರೆ. ರಸ್ತೆಯ ಒಂದು ಭಾಗ ಕುಸಿದಿದೆ ಎಂದು ರಸ್ತೆ ನಿರ್ಮಾಣ ಇಲಾಖೆಸ್ಪಷ್ಟಪಡಿಸಿದೆ.

ADVERTISEMENT

ಗೋಪಾಲ್‌ಗಂಜ್‌ ಮತ್ತು ಪೂರ್ವ ಚಂಪಾರಣ್ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಇದನ್ನು ಜೂನ್‌ 16 ರಂದು ಉದ್ಘಾಟಿಸಲಾಗಿತ್ತು.ಒಂದು ಕಿ.ಮೀ. ಉದ್ದದ ಈ ಸೇತುವೆಯನ್ನು ನಿರ್ಮಿಸಲು ಎಂಟು ವರ್ಷ ತೆಗೆದುಕೊಳ್ಳಲಾಗಿತ್ತು.

ಪ್ರವಾಹಕ್ಕೆ ತತ್ತರಿಸಿದ ಬಿಹಾರ: ರಾಜ್ಯದ ಒಟ್ಟು ಎಂಟು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಗೋಪಾಲ್‌ಗಂಜ್ ಮತ್ತು ಪೂರ್ವ ಚಂಪಾರಣ್ ಕೂಡ ಸೇರಿದೆ. ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ 2.18 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ.ಈವರೆಗೆ 3,376 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.