ADVERTISEMENT

ವಂಚನೆ ಆರೋಪ: ಬೆಂಗಳೂರಿನ ಸಂಸ್ಥೆಗೆ ಸೇರಿದ ₹ 35.70 ಕೋಟಿ ಮೌಲ್ಯದ ಸ್ವತ್ತು ಜಪ್ತಿ

ಪಿಟಿಐ
Published 3 ನವೆಂಬರ್ 2021, 7:19 IST
Last Updated 3 ನವೆಂಬರ್ 2021, 7:19 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ: ಹೆಚ್ಚಿನ ಆದಾಯದ ಆಮಿಷ ತೋರಿ ಹೂಡಿಕೆದಾರರಿಗೆ ವಂಚಿಸಿದ ಆರೋಪಗಳ ಮೇಲೆ ಬೆಂಗಳೂರು ಮೂಲದ ವಿಕ್ರಮ್‌ ಇನ್ವೆಸ್ಟ್‌ಮೆಂಟ್ಸ್‌ ಆ್ಯಂಡ್‌ ಅಸೋಸಿಯೇಟ್ಸ್‌ ವಿರುದ್ಧ ತನಿಖೆ ಕೈಗೊಂಡಿರುವಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಕಚೇರಿ, ಫ್ಲ್ಯಾಟ್‌ಗಳು ಸೇರಿ ₹ 35.70 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

ಅಲ್ಲದೇ, ಸಂಸ್ಥೆ ಹೆಸರಿನಲ್ಲಿ ಬ್ಯಾಂಕ್‌ನಲ್ಲಿದ್ದ ₹ 1.49 ಕೋಟಿಠೇವಣಿಯನ್ನು ಜಪ್ತಿ ಮಾಡಿದ್ದಾರೆ.

ಸಂಸ್ಥೆಯ ವಿರುದ್ಧ ಬೆಂಗಳೂರು ಪೊಲೀಸರು 2018ರ ಮಾರ್ಚ್‌ನಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಎಫ್ಐಆರ್‌ ಆಧಾರದ ಮೇಲೆ ಸಂಸ್ಥೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ ತನಿಖೆ ನಡೆಸುತ್ತಿದೆ.

ADVERTISEMENT

‘ಸಂಸ್ಥೆಯ ಪಾಲುದಾರರಾದ ರಾಘವೇಂದ್ರ ಶ್ರೀನಾಥ್‌, ಕೆ.ಪಿ.ನರಸಿಂಹಮೂರ್ತಿ, ಎಂ.ಪ್ರಹ್ಲಾದ್‌, ಕೆ.ಸಿ.ನಾಗರಾಜ್ ಹಾಗೂ ಸೂತ್ರಂ ಸುರೇಶ್‌ ಅವರು ಜನರಿಗೆ ವಂಚಿಸಿದ್ದಾರೆ. ವಿಕ್ರಮ್‌ ಇನ್ವೆಸ್ಟ್‌ಮೆಂಟ್‌ನಲ್ಲಿ ಹೂಡಿಕೆ ಮಾಡಿದರೆ, ಕಮಾಡಿಟಿ ಟ್ರೇಡಿಂಗ್‌ ಮಾಡಿ ಅಧಿಕ ಆದಾಯ ನೀಡುವ ಆಮಿಷ ಒಡ್ಡಿದ್ದರು. ಇದನ್ನು ನಂಬಿ ಸಾಕಷ್ಟು ಜನರು ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ಷಿಕ ಶೇ 30–35ರಷ್ಟು ಆದಾಯದ ಆಮಿಷವೊಡ್ಡಿ, ಜನರಿಂದ ಹಣ ಸಂಗ್ರಹಿಸಿದ್ದರು. ಭರವಸೆ ನೀಡಿದಂತೆ ಮೊದಲ ಕಂತಿನ ಹಣವನ್ನು ಹಿಂದಿರುಗಿಸಲಾಗಿತ್ತು. ಇದು ಸಂಸ್ಥೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿಸಿತ್ತಲ್ಲದೇ ಇನ್ನಷ್ಟು ಹೆಚ್ಚು ಹಣ ಹೂಡಿಕೆ ಮಾಡುವಂತೆ ಜನರಲ್ಲಿ ಆಸೆ ಹುಟ್ಟಿಸಿತು. ನಂತರ, ಅಸಲು ಸೇರಿದಂತೆ ಯಾವುದೇ ಹಣವನ್ನು ಸಂಸ್ಥೆ ಹಿಂದಿರುಗಿಸುವುದನ್ನು ನಿಲ್ಲಿಸಿತು’ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ.

‘2,420 ಜನರು ₹ 417 ಕೋಟಿ ಹೂಡಿಕೆ ಮಾಡಿದ್ದರು. ಈ ಪೈಕಿ ₹ 331 ಕೋಟಿ ಮೊತ್ತವನ್ನು ಲಾಭದ ಹೆಸರಿನಲ್ಲಿ ಗ್ರಾಹಕರಿಗೆ ಹಿಂದಿರುಗಿಸಲಾಗಿತ್ತು. ಉಳಿದ ₹ 86 ಕೋಟಿಯನ್ನು ರಾಘವೇಂದ್ರ ಶ್ರೀನಾಥ್‌ ಹಾಗೂ ಇತರರು ದುರ್ಬಳಕೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಇ.ಡಿ ಹೇಳಿದೆ.

‘ಆರ್‌ಬಿಐ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಈ ಸಂಸ್ಥೆ ನೋಂದಣಿಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.