
ನವದೆಹಲಿ: ಕಳೆದ ಐದು ವರ್ಷಗಳಲ್ಲಿ ರಸ್ತೆ ಗುಂಡಿಗಳಿಂದಾಗಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಶೇ 53ರಷ್ಟು ಹೆಚ್ಚಾಗಿದೆ.
2020ರಿಂದ 2024ರ ನಡುವೆ ದೇಶದಾದ್ಯಂತ 9,438 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರವು ಸಂಸತ್ಗೆ ತಿಳಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಲಿಖಿತ ಉತ್ತರದ ಪ್ರಕಾರ, ಉತ್ತರ ಪ್ರದೇಶದಲ್ಲಿ ಶೇ 54ಕ್ಕಿಂತ ಹೆಚ್ಚು ಸಾವು (5,127 ಮಂದಿ) ಸಂಭವಿಸಿದ್ದು, ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಮಧ್ಯಪ್ರದೇಶವಿದ್ದು, 969 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 612, ಪಂಜಾಬ್ನಲ್ಲಿ 414 ಮಂದಿ ಅಸುನೀಗಿದ್ದಾರೆ.
2021ರಲ್ಲಿ ಸಾವಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ, ನಂತರ ನಿರಂತರವಾಗಿ ಏರಿಕೆಯಾಗುತ್ತಿದೆ. 2024ರಲ್ಲಿ 2,385 ಮಂದಿ ಸಾವಿಗೀಡಾಗಿದ್ದಾರೆ.
ಆಂಧ್ರಪ್ರದೇಶ, ಬಿಹಾರ, ಗೋವಾ ಸೇರಿದಂತೆ ಕೆಲ ರಾಜ್ಯಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ, ಯಾವುದೇ ಗುಂಡಿಗಳಿಗೆ ಸಂಬಂಧಿಸಿದ ಅಪಘಾತಗಳು ಅಥವಾ ಸಾವು–ನೋವು ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ವರದಿ ಮಾಡಿಲ್ಲ.
ಈ ಅವಧಿಯಲ್ಲಿ, ದೇಶದಾದ್ಯಂತ ರಸ್ತೆ ಗುಂಡಿಗಳಿಂದ 23,056 ಅಪಘಾತಗಳು ಸಂಭವಿಸಿದ್ದು, 19,956 ಮಂದಿ ಗಾಯಗೊಂಡಿದ್ದಾರೆ. ಇವುಗಳ ಪೈಕಿ 9,670 ಪ್ರಕರಣಗಳನ್ನು ‘ತೀವ್ರ ಸ್ವರೂಪದ ಗಾಯಗಳು’ ಎಂದು ವರ್ಗೀಕರಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಕೇಂದ್ರ ಸರ್ಕಾರ ಜವಾಬ್ದಾರಿಯಾಗಿದ್ದರೆ, ಆಯಾ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಗೆ ಬರುವ ರಸ್ತೆಗಳ ಜವಾಬ್ದಾರಿಯನ್ನು ಹೊಂದಿರುತ್ತವೆ. ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿ ಜಾಲದ ನಿರ್ವಹಣೆಗೆ ಸರ್ಕಾರವು ಆದ್ಯತೆ ನೀಡಿದೆ. ಎಲ್ಲ ರಸ್ತೆಗಳನ್ನು ಜವಾಬ್ದಾರಿಯುತ ನಿರ್ವಹಣಾ ಏಜೆನ್ಸಿಗಳ ಮೂಲಕ ದುರಸ್ತಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಒಂದು ವ್ಯವಸ್ಥೆಯನ್ನು ರೂಪಿಸಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.