ADVERTISEMENT

ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ರದ್ದು ಅಧಿಕಾರ ಅಪರೂಪಕ್ಕೆ ಬಳಸಬೇಕು -ಸುಪ್ರೀಂ

ಪಿಟಿಐ
Published 19 ಫೆಬ್ರುವರಿ 2022, 11:30 IST
Last Updated 19 ಫೆಬ್ರುವರಿ 2022, 11:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ರದ್ದುಪಡಿಸಲು ದತ್ತವಾಗಿರುವ ಅಧಿಕಾರವನ್ನು ಅಪರೂಪಕ್ಕೆ ಬಳಸಬೇಕು. ಅದು ಕೂಡಾ ಅಪರೂಪದಲ್ಲಿ ಅಪರೂಪ ಎಂಬ ಪ್ರಕರಣಗಳಿಗಷ್ಟೇ ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿ ಮೂವರ ವಿರುದ್ಧ ದಾಖಲಿಸಿದ್ದ ವಂಚನೆ, ನಕಲಿ ದಾಖಲೆ ಸೃಷ್ಟಿ ಕುರಿತ ಪ್ರಕರಣವನ್ನು ವಜಾಗೊಳಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಎಸ್‌.ರವೀಂದ್ರ ಭಟ್‌ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮೇಲ್ನೋಟದ ಸಾಕ್ಷ್ಯವನ್ನಷ್ಟೇ ಆಧರಿಸಿ ಕ್ರಿಮಿನಲ್‌ ಮೊಕದ್ದಮೆ ದಾಖಲು ಮತ್ತು ಖಾಸಗಿ ಅಥವಾ ವೈಯಕ್ತಿಕ ವೈಮನಸ್ಯದಿಂದಾಗಿ ಆರೋಪಿಗಳ ವಿರುದ್ಧದ ದ್ವೇಷಸಾಧನೆಗಾಗಿ ಪ್ರಕರಣ ದಾಖಲಿಸಿರುವ ಸಂದರ್ಭಗಳಲ್ಲಿ ಈ ಅಧಿಕಾರವನ್ನು ಬಳಸಬಹುದು ಎಂದು ಪೀಠ ಹೇಳಿತು.

ADVERTISEMENT

ಈ ಪ್ರಕರಣದಲ್ಲಿ ಆರೋಪಿಗಳಿಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಮೊಕದ್ದಮೆ ದಾಖಲಿಸಲಾಗಿದೆ. ಸೆಕ್ಷನ್ 156 (3)ರ ಅನ್ವಯ ಮ್ಯಾಜಿಸ್ಟ್ರೇಟರು ಆದೇಶ ನೀಡುವ ಮುನ್ನ ಸುಪ್ರೀಂ ಕೋರ್ಟ್‌ ಜಾರಿಗೊಳಿಸಿರುವ ಕಾನೂನು ಅರ್ಥಮಾಡಿಕೊಂಡಿಲ್ಲ ಎಂದು ಪೀಠ ಹೇಳಿತು.

ಸಿಆರ್‌ಪಿಸಿ ಕಾಯ್ದೆ 1973ರ ಸೆಕ್ಷನ್‌ 156 (3)ರಡಿ ದತ್ತವಾಗಿರುವ ಅಧಿಕಾರದಡಿ ಮ್ಯಾಜಿಸ್ಟ್ರೇಟ್‌ ಅವರು, ಅಪರಾಧ ಗೋಚರವಾಗುವ ಸಂದರ್ಭದಲ್ಲಿ ಮಾತ್ರವೇ ತನಿಖೆ ನಡೆಸುವಂತೆ ಪೊಲೀಸರಿಗೆ ಅಧಿಕಾರ ನೀಡಬಹುದಾಗಿದೆ ಎಂದು ಸ್ಪಷ್ಟಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.