ದೀಪಂಕರ್ ಭಟ್ಟಾಚಾರ್ಯ
–ಪಿಟಿಐ ಚಿತ್ರ
ಪಟ್ನಾ: ‘ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು ರಾಜ್ಯದಲ್ಲಿ ವಾಸಿಸುವ ಜನರಿಗಿಂತಲೂ ಬಿಹಾರದ ವಲಸಿಗರಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿದೆ’ ಎಂದು ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ‘ಪ್ರಶಾಂತ್ ಕಿಶೋರ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದು ನನಗೆ ಆಶ್ಚರ್ಯ ಉಂಟುಮಾಡಿಲ್ಲ’ ಎಂದು ಹೇಳಿದರು. ಜನ ಸುರಾಜ್ ಪಾರ್ಟಿಯನ್ನು ‘ಬಿಜೆಪಿಯಂತೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ’ಯಾಗಿ ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
‘ದೆಹಲಿಯಂತಹ ನಗರದಲ್ಲಿ ವಾಸಿಸುವ ಬಿಹಾರದ ವಲಸೆ ಕಾರ್ಮಿಕರಲ್ಲಿ ಜನ ಸುರಾಜ್ ಪಾರ್ಟಿ ಪ್ರಮುಖವಾಗಿ ಸಂಚಲನ ಸೃಷ್ಟಿಸಿದೆ ಎಂಬುದನ್ನು ನಾನು ನಂಬುತ್ತೇನೆ. ಅಲ್ಲಿ ಅವರು (ಬಿಹಾರದ ವಲಸಿಗರು) ಅರವಿಂದ ಕೇಜ್ರಿವಾಲ್ ಮೇಲೆ ನಂಬಿಕೆ ಇಟ್ಟಿದ್ದರು ಮತ್ತು ಆಮ್ ಆದ್ಮಿ ಪಕ್ಷವು ನೀಡಿದ್ದ ಅದೇ ಭರವಸೆಯನ್ನು ಪ್ರಶಾಂತ್ ಕಿಶೋರ್ ಅವರಲ್ಲಿ ಕಂಡಿದ್ದರು’ ಎಂದರು.
‘ಆದರೆ, ಬಿಹಾರದಲ್ಲಿ, ಪರಿಸ್ಥಿತಿ ಭಿನ್ನವಾಗಿದೆ. ಜನ ಸುರಾಜ್ ಪಾರ್ಟಿಯು ಇಲ್ಲಿನ ಜನರಲ್ಲಿ ಅದೇ ರೀತಿಯ ಪ್ರಭಾವವನ್ನು ಹೊಂದಿಲ್ಲ. ಚುನಾವಣೆ ಸಮೀಪಿಸುತ್ತಿರುವ ಬಿಹಾರದಲ್ಲಿ ಹೋರಾಟವು ಮುಕ್ತವಾಗಿದೆ. ಪ್ರಶಾಂತ್ ಕಿಶೋರ್ ಅವರು ರಾಜ್ಯದಲ್ಲಿ ಹಲವು ತಿಂಗಳು ಪ್ರವಾಸ ಮಾಡಿದ ಕಾರಣ ವಾಸ್ತವವನ್ನು ಅರಿತುಕೊಂಡಿರಬೇಕು. ಅವರು ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿರುವುದರ ಹಿಂದಿನ ಕಾರಣವೂ ಇದೇ ಇರಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.