ಶಹಜಾನ್ಪುರ(ಉತ್ತರ ಪ್ರದೇಶ):ರೈಲಿನಲ್ಲಿ ಸಹ ಪ್ರಯಾಣಿಕರು ಧೂಮಪಾನ ಮಾಡಿದ್ದನ್ನು ಪ್ರಶ್ನಿಸಿದ ಗರ್ಭಿಣಿಯೊಬ್ಬರನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಚಿನತ್ ದೇವಿ(45) ಎಂಬುವರು ಕುಟುಂಬ ಸಮೇತ ಪಂಜಾಬ್–ಬಿಹಾರ ಜಲಿಯನ್ವಾಲ ಎಕ್ಸ್ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಹ ಪ್ರಯಾಣಿಕ ಸೋನು ಯಾಧವ್ ಎಂಬುವರು ಧೂಮಪಾನ ಮಾಡಿದ್ದನ್ನು ಪ್ರಶ್ನಿಸಿದ್ದಾರೆ.
ಪರಸ್ಪರ ವಾಗ್ವಾದ ತಾರಕಕ್ಕೇರಿದ್ದು, ಯಾಧವ್ ಅವರು ಮಹಿಳೆಯ ಕತ್ತು ಹಿಸುಕಿದ್ದಾರೆ. ಬಳಿಕ ಶಹರಾನ್ಪುರದಲ್ಲಿ ರೈಲನ್ನು ನಿಲ್ಲಿಸಲಾಗಿದ್ದು, ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ ಎಂದು ಶಹಜಾನ್ಪುರದ ಜಿಆರ್ಪಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಎ.ಕೆ. ಪಾಂಡೆ ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆ ಮತ್ತು ಅವರ ಕುಟುಂಬ ಛತ್ ಪೂಜೆಯಲ್ಲಿ ಪಾಲ್ಗೊಳ್ಳಲು ಬಿಹಾರಕ್ಕೆ ತೆರಳುತ್ತಿದ್ದರು ಎಂದು ಪಾಂಡೆ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ಮೃತದೇಹವನ್ನು ಶವ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.