
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ತಿರುಪತಿಯಲ್ಲಿ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದರು– ಪಿಟಿಐ ಚಿತ್ರ
ತಿರುಪತಿ: ಆಂಧ್ರಪ್ರದೇಶದ ತಿರುಮಲಕ್ಕೆ ಶುಕ್ರವಾರ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೆಂಕಟೇಶ್ವರ ಸ್ವಾಮಿಯ (ತಿಮ್ಮಪ್ಪ) ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ತಿರುಮಲ ದೇಗುಲದ ಮಹಾದ್ವಾರ ಪ್ರವೇಶಕ್ಕೂ ಮುನ್ನ ಮುರ್ಮು ಅವರು, ವರಾಹ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದರು. ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ನ (ಟಿಟಿಡಿ) ಮುಖ್ಯಸ್ಥ ಬಿ.ಆರ್.ನಾಯ್ಡು ಅವರು ರಾಷ್ಟ್ರಪತಿಯವರನ್ನು ಸ್ವಾಗತಿಸಿದರು.
‘ಕುಟುಂಬ ಸಮೇತ ಆಗಮಿಸಿದ್ದ ರಾಷ್ಟ್ರಪತಿಯವರು ವೆಂಕಟೇಶ್ವರ ಸ್ವಾಮಿ ಸೇರಿದಂತೆ ಬೆಟ್ಟದಲ್ಲಿರುವ ಎಲ್ಲ ದೇಗುಲಗಳಿಗೂ ತೆರಳಿ ದರ್ಶನ ಪಡೆದರು. ಆಂಧ್ರಪ್ರದೇಶ ಧಾರ್ಮಿಕ ದತ್ತಿ ಸಚಿವ ಎ.ರಾಮನಾರಾಯಣ ರೆಡ್ಡಿ ಜೊತೆಯಲ್ಲಿದ್ದರು’ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ತಿಮ್ಮಪ್ಪನಿಗೆ ಶೇಷ ವಸ್ತ್ರ ಅರ್ಪಿಸಿದ ರಾಷ್ಟ್ರಪತಿಗೆ ರಂಗನಾಯಕಲು ಮಂಟಪದಲ್ಲಿ ವೇದಾಶೀರ್ವಚನ ನೀಡಲಾಯಿತು. ಆನಂತರ ಅವರು ತೀರ್ಥ ಪ್ರಸಾದ ಸ್ವೀಕರಿಸಿದರು. ಇದೇ ವೇಳೆ, ಟಿಟಿಡಿ ಹೊರತಂದಿರುವ 2026ನೇ ಸಾಲಿನ ಡೈರಿಗಳು (ದಿನಚರಿ) ಮತ್ತು ಕ್ಯಾಲೆಂಡರ್ (ದಿನದರ್ಶಿಕೆ)ಗಳನ್ನು ಮುರ್ಮು ಅವರಿಗೆ ನೀಡಿ ಗೌರವಿಸಲಾಯಿತು.
ಗುರುವಾರ ಸಂಜೆ ತಿರುಪತಿ ಜಿಲ್ಲೆಯ ತಿರುಚನೂರಿನಲ್ಲಿರುವ ಪದ್ಮಾವತಿ ದೇಗುಲಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆನಂತರ ತಿರುಮಲಕ್ಕೆ ಶುಕ್ರವಾರ ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.