ADVERTISEMENT

ನಿರ್ಭಯಾ: ಗಲ್ಲು ಜಾರಿಗೆ ಹೊಸ ದಿನಾಂಕಕ್ಕೆ ಕೋರಿಕೆ

ಪಿಟಿಐ
Published 4 ಮಾರ್ಚ್ 2020, 18:44 IST
Last Updated 4 ಮಾರ್ಚ್ 2020, 18:44 IST
   

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ದಯಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ತಿರಸ್ಕರಿಸಿದ್ದಾರೆ.

ದಯಾ ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ, ಪ್ರಕರಣದ ನಾಲ್ವರೂ ಅಪರಾಧಿಗಳನ್ನು ಗಲ್ಲಿಗೇರಿಸಲು ಹೊಸ ದಿನಾಂಕ ನಿಗದಿಪಡಿಸುವಂತೆ ಕೋರಿ ದೆಹಲಿ ಸರ್ಕಾರ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ನಾಲ್ವರೂ ಅಪರಾಧಿಗಳು ಈ ಕುರಿತು ಗುರುವಾರದೊಳಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ನಿರ್ದೇಶನ ನೀಡಿದ್ದಾರೆ.

ADVERTISEMENT

ತಿಹಾರ್ ಜೈಲಿನ ಅಧಿಕಾರಿಗಳು ಸಹ ಗಲ್ಲು ಜಾರಿಗೆ ಹೊಸ ದಿನಾಂಕ ನೀಡುವಂತೆ ಪಟಿಯಾಲಾ ಹೌಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ.

ಇದಕ್ಕೂ ಮೊದಲು ಉಳಿದ ಮೂವರು ಅಪರಾಧಿಗಳಾದ ಮುಖೇಶ್, ವಿನಯ್ ಹಾಗೂ ಅಕ್ಷಯ್ ಸಲ್ಲಿಸಿದ್ದ ದಯಾ ಅರ್ಜಿಗಳನ್ನು ಸಹ ರಾಷ್ಟ್ರಪತಿ ತಿರಸ್ಕರಿಸಿದ್ದರು. ಪವನ್ ಮಾರ್ಚ್‌ 2ರಂದು ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ್ದರಿಂದ ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ಜಾರಿಯಾಗಬೇಕಿದ್ದ ಗಲ್ಲುಶಿಕ್ಷೆಯನ್ನು ಮೂರನೇ ಬಾರಿಗೆ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.