ಚಂಡೀಗಡ: ರಾಜ್ಯ ವಿಧಾನಸಭೆಯಲ್ಲಿ ಮಾರ್ಚ್ 10ರಂದು ಬಿಜೆಪಿ–ಜೆಜೆಪಿ ಸರ್ಕಾರ ವಿಶ್ವಾಸಮತ ಯಾಚಿಸಲಿದೆ.
ಅವಿಶ್ವಾಸ ನಿಲುವಳಿ ಪರ ಮತ ಚಲಾಯಿಸುವಂತೆ ಆಡಳಿತಾರೂಢ ಬಿಜೆಪಿ–ಜೆಜೆಪಿ ಶಾಸಕರಿಗೆ ಒತ್ತಡ ಹೇರಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಜನರಿಗೆ ಮನವಿ ಮಾಡಿದೆ.
ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟ ನಡೆಸುತ್ತಿದೆ.
‘ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ಮೌನವಹಿಸಿದೆ. ಹೀಗಾಗಿ, ರೈತರು ಮತ್ತು ನಾಗರಿಕರು ಬಿಜೆಪಿ ಮತ್ತು ಜೆಜೆಪಿ ಶಾಸಕರನ್ನು ಭೇಟಿಯಾಗಿ ಅವಿಶ್ವಾಸ ಪರ ಮತ ಚಲಾಯಿಸುವಂತೆ ಮನವೊಲಿಸುವ ಪ್ರಯತ್ನ ಮಾಡಬೇಕು. ಈ ಮೂಲಕ ಸರ್ಕಾರಕ್ಕೆ ಪಾಠ ಕಲಿಸಬೇಕು’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಡಾ. ದರ್ಶನ್ ಪಾಲ್ ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ ಚೌತಾಲಾ, ‘ರೈತ ಮುಖಂಡರು ಸರ್ಕಾರದ ಜತೆ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಇತ್ಯರ್ಥಗೊಳಿಸಬೇಕು’ ಎಂದು ಹೇಳಿದರು.
ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿಯನ್ನು ಕಾಂಗ್ರೆಸ್ ಬುಧವಾರ ಮಂಡಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.