ADVERTISEMENT

ಪ್ರತಿಭಾನ್ವೇಷಣೆಗೆ ಮಾತೃಭಾಷೆ ಶಿಕ್ಷಣ ಪರಿಣಾಮಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಪಿಟಿಐ
Published 5 ಸೆಪ್ಟೆಂಬರ್ 2022, 13:48 IST
Last Updated 5 ಸೆಪ್ಟೆಂಬರ್ 2022, 13:48 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ನಮಿಸಿದರು–ಪಿಟಿಐ ಚಿತ್ರ 
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ನಮಿಸಿದರು–ಪಿಟಿಐ ಚಿತ್ರ    

ನವದೆಹಲಿ: ‘ವಿಜ್ಞಾನ, ಸಾಹಿತ್ಯ ಮತ್ತು ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರತಿಭಾನ್ವೇಷಣೆಗೆ ಮಾತೃಭಾಷೆ ಶಿಕ್ಷಣ ಹೆಚ್ಚು ಪರಿಣಾಮಕಾರಿ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದವಿ.ಪೊನಶಂಕರಿ ಮತ್ತು ಟಿ.ಪಿ.ಉಮೇಶ್‌ ಸೇರಿದಂತೆ ಒಟ್ಟು 46 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ವಿಜ್ಞಾನ, ಸಂಶೋಧನೆ ಹಾಗೂ ಆವಿಷ್ಕಾರವು ಜ್ಞಾನಾಧಾರಿತ ಆರ್ಥಿಕತೆಯ ಬುನಾದಿಗಳಾಗಿವೆ. ಈ ಕ್ಷೇತ್ರಗಳಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಉತ್ತಮಪಡಿಸಬೇಕು. ಇದಕ್ಕೆ ಶಾಲಾ ಹಂತದಲ್ಲೇ ಅಡಿಪಾಯ ಹಾಕಬೇಕು. ಶಿಕ್ಷಕರು ಮಕ್ಕಳಲ್ಲಿ ಪ್ರಶ್ನೆ ಕೇಳುವ ಹಾಗೂ ಅನುಮಾನ ವ್ಯಕ್ತಪಡಿಸುವ ಮನೋಭಾವ ಬೆಳೆಸಬೇಕು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ಹಾಗೂ ಅವರ ಅನುಮಾನಗಳನ್ನು ಪರಿಹರಿಸುವುದರಿಂದ ಶಿಕ್ಷಕರ ಜ್ಞಾನವೂ ಹೆಚ್ಚುತ್ತದೆ’ ಎಂದಿದ್ದಾರೆ.

ADVERTISEMENT

‘ಆರಂಭದಲ್ಲಿ ನಮಗೆ ಬದುಕುವ ಕಲೆ ಕಲಿಸಿಕೊಟ್ಟವರು ಅಮ್ಮಂದಿರು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರಗೆಡವಲು ಮಾತೃಭಾಷೆ ಶಿಕ್ಷಣ ಸಹಕಾರಿ. ಹೀಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಶಾಲಾ ಹಾಗೂ ಉನ್ನತ ಶಿಕ್ಷಣದಲ್ಲಿ ಸ್ಥಳೀಯ ಭಾಷೆ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.