ಸುಲ್ತಾನ್ಪುರ (ಉತ್ತರ ಪ್ರದೇಶ): ಇಲ್ಲಿನ ಕರ್ವಾಲ್ ಖೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪೂರ್ವಾಂಚಲ ಎಕ್ಸ್ಪ್ರೆಸ್ವೇ ಉದ್ಘಾಟಿಸಲಿದ್ದಾರೆ. ಅನಂತರದಲ್ಲಿ ಭಾರತೀಯ ವಾಯು ಪಡೆ ನಡೆಸುವ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ವೀಕ್ಷಿಸಲಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಹಾರಾಟ ಆರಂಭಿಸಲು ಮತ್ತು ಬಂದಿಳಿಯಲು ಸುಲ್ತಾನ್ಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಏರ್ಸ್ಟ್ರಿಪ್ ಅನುವಾಗಲಿದೆ. 3.2 ಕಿ.ಮೀ ಉದ್ದದ ವಿಮಾನ ಇಳಿಯುವ ದಾರಿಯನ್ನು ನಿರ್ಮಿಸಲಾಗಿದೆ. ವಾಯು ಪಡೆಯು ಇಂದು ವಿಶೇಷ ವೈಮಾನಿಕ ಹಾರಾಟ ಪ್ರದರ್ಶನ ನಡೆಸಲಿದೆ.
340 ಕಿ.ಮೀ. ಉದ್ದದ ಪೂರ್ವಾಂಚಲ ಎಕ್ಸ್ಪ್ರೆಸ್ವೇ ಲಖನೌದ ಚಾಂದ್ಸರಾಯ್ ಗ್ರಾಮದಿಂದ ಶುರುವಾಗಿ ರಾಷ್ಟ್ರೀಯ ಹೆದ್ದಾರಿ 31ರ ಗಾಜಿಪುರದ ಹೈದರಿಯಾ ಗ್ರಾಮದಲ್ಲಿ (ಉತ್ತರ ಪ್ರದೇಶ–ಬಿಹಾರ ಗಡಿಯಿಂದ 18 ಕಿ.ಮೀ. ದೂರ) ಕೊನೆಯಾಗುತ್ತದೆ. ಈ ಎಕ್ಸ್ಪ್ರೆಸ್ವೇನಲ್ಲಿ ಪ್ರಸ್ತುತ ಆರು–ಪಥಗಳಿದ್ದು, ಮುಂದೆ ಎಂಟು ಪಥಗಳಿಗೆ ವಿಸ್ತರಿಸುವ ಅವಕಾಶವಿದೆ.
ಅಂದಾಜು ₹22,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೂರ್ವಾಂಚಲ ಎಕ್ಸ್ಪ್ರೆಸ್ವೇ, ಉತ್ತರ ಪ್ರದೇಶದ ಪೂರ್ವ ಭಾಗದ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ವಿಶ್ಲೇಷಿಸಲಾಗಿದೆ. ಲಖನೌ, ಅಮೇಠಿ, ಅಯೋಧ್ಯ, ಸುಲ್ತಾನ್ಪುರ, ಅಂಬೇಡ್ಕರ್ ನಗರ್, ಬಾರಾಬಂಕಿ, ಆಜಂಗಡ, ಗಾಜಿಪುರ ಹಾಗೂ ಮವೂ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಖೋಯ್, ಮಿರೇಜ್, ರಫೇಲ್ ಹಾಗೂ ಎಎನ್–32 ವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿ–130 ಹರ್ಕ್ಯುಲಸ್ ವಿಮಾನದಲ್ಲಿ ಉದ್ಘಾಟನೆಯಾಗಲಿರುವ ಏರ್ಸ್ಟ್ರಿಪ್ಗೆ ಬಂದಿಳಿಯಲಿದ್ದಾರೆ.
2018ರ ಜುಲೈನಲ್ಲಿ ಆಜಂಗಡದಲ್ಲಿ ಪ್ರಧಾನಿ ಮೋದಿ ಅವರು ಪೂರ್ವಾಂಚಲ ಎಕ್ಸ್ಪ್ರೆಸ್ವೇ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.