ADVERTISEMENT

ಬಿಹಾರ: ಬಸ್ಕಿ ಹೊಡೆಸಿದ್ದ ಕೃಷಿ ಅಧಿಕಾರಿಗೆ ಬಡ್ತಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 19:45 IST
Last Updated 26 ಏಪ್ರಿಲ್ 2020, 19:45 IST

ಪಟ್ನಾ (ಬಿಹಾರ): ಕರ್ತವ್ಯದ ಮೇಲಿದ್ದ ಪೊಲೀಸ್‌ ಅಧಿಕಾರಿಗೆ ಬಸ್ಕಿ ಹೊಡೆಸಿ ವಿವಾದ ಸೃಷ್ಟಿಸಿದ್ದ ಕೃಷಿ ಅಧಿಕಾರಿ ಮನೋಜ್‌
ಕುಮಾರ್‌ಗೆ ಬಡ್ತಿ ದೊರೆತಿರುವುದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಅರಾರಿಯಾ ಜಿಲ್ಲಾ ಕೃಷಿ ಅಧಿಕಾರಿ ಮನೋಜ್‌ ಕುಮಾರ್‌ಗೆ ಪಟ್ನಾದ ಕೇಂದ್ರ ಕಚೇರಿಯ ಉಪ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ ಎಂದು ಬಿಹಾರ ಸರ್ಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಕೆಲವು ದಿನಗಳ ಹಿಂದೆ ಲಾಕ್‌ಡೌನ್ ನಿಯಮಾನುಸಾರ ವಾಹನದ ಪಾಸ್‌ ತೋರಿಸುವಂತೆ ಕಿರಿಯ‌ ಪೊಲೀಸ್‌ ಅಧಿಕಾರಿ ಗಣೇಶ್‌ ಲಾಲ್‌ ಅವರು ಮನೋಜ್‌ ಕುಮಾರ್‌ಗೆ ಕೇಳಿದ್ದರು. ಇದರಿಂದ ಮನೋಜ್‌ ಕೋಪಗೊಂಡಿದ್ದರು. ಈ ಘಟನೆ ಎಸ್‌ಐ ಗೋವಿಂದ್‌ಸಿಂಗ್‌ ಗಮನಕ್ಕೆ ಬಂದಾಗ ಅವರು, ಹಿರಿಯ ಅಧಿಕಾರಿಯನ್ನು ಪ್ರಶ್ನಿಸುವ ‘ಧೈರ್ಯ’ ತೋರಿದ್ದಕ್ಕೆ ಎಲ್ಲರೆದರು ಐವತ್ತು ಬಸ್ಕಿ ಹೊಡೆಯುವಂತೆ ಗಣೇಶ್‌ ಲಾಲ್‌ಗೆ ಆದೇಶ ನೀಡಿದ್ದರು.

ADVERTISEMENT

ಗಣೇಶ್‌ಲಾಲ್‌ ಬಸ್ಕಿ ಹೊಡೆದು, ಮಂಡಿಯೂರಿ ಕ್ಷಮೆ ಕೇಳಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಅಧಿಕಾರಿಗಳ ದರ್ಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

‌ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ ಅವರು ಗಣೇಶ್‌ ಲಾಲ್‌ ಅವರಲ್ಲಿ ಕ್ಷಮೆಯಾಚಿಸಿ, ಗೋವಿಂದ್‌ ಸಿಂಗ್‌ ಅವರನ್ನು ಅಮಾನತುಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.