ADVERTISEMENT

ಶಬರಿಮಲೆ: ಆನ್‌ಲೈನ್‌ ಬುಕಿಂಗ್ ಪ್ರಸ್ತಾವಕ್ಕೆ ಟಿಡಿಬಿ ವಿರೋಧ

‘ದೇಗುಲದ ಪರಂಪರಾನುಗತ ಸಂಪ್ರದಾಯಗಳಲ್ಲಿ ಮಧ್ಯಪ್ರವೇಶಿಸಲು ಮಾಡಿರುವ ಈ ಸಲಹೆಯನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದು ಟಿಡಿಬಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪಿಟಿಐ
Published 4 ಸೆಪ್ಟೆಂಬರ್ 2018, 2:47 IST
Last Updated 4 ಸೆಪ್ಟೆಂಬರ್ 2018, 2:47 IST
ಶಬರಿಮಲೆ ದೇಗುಲ
ಶಬರಿಮಲೆ ದೇಗುಲ   

ತಿರುವನಂತಪುರ: ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇಗುಲಕ್ಕೆ ಬರುವ ಭಕ್ತಾದಿಗಳನ್ನು ನಿಯಂತ್ರಿಸಲು ಆನ್‌ಲೈನ್‌ ಬುಕಿಂಗ್ ವ್ಯವಸ್ಥೆ ಜಾರಿಗೆ ತರುವಪ್ರಸ್ತಾವ ‘ಅವಾಸ್ತವ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸೋಮವಾರ ಹೇಳಿದೆ.

ಭಕ್ತಾದಿಗಳು ಪಂಪಾ ನದಿ ತೀರದಿಂದ ಕಾಲ್ನಡಿಗೆಯಲ್ಲಿ ಶಬರಿಮಲೆ ಏರಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಆದರೆ, ಪ್ರವಾಹದಿಂದಾಗಿ ಪಂಪಾ ನದಿ ತೀರ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಇದರಿಂದಾಗಿ, ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ನಿಯಂತ್ರಿಸಲು ಈಚೆಗೆಪೊಲೀಸ್‌ ಇಲಾಖೆ ಆನ್‌ಲೈನ್‌ ಬುಕಿಂಗ್ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ವರದಿಯಾಗಿತ್ತು.

‘ಪಂಪಾ ನದಿ ತೀರದಲ್ಲಿನ ಮೂಲಸೌಕರ್ಯಗಳನ್ನು ಪುನರ್‌ನಿರ್ಮಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಭಕ್ತಾದಿಗಳ ಸಂಖ್ಯೆ ನಿಯಂತ್ರಿಸುವ ಅವಶ್ಯಕತೆ ಇಲ್ಲ’ ಎಂದುಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್ ತಿಳಿಸಿದ್ದಾರೆ.

ADVERTISEMENT

ತಿರುಪತಿ ಮಾದರಿ ಸಾಧ್ಯವಿಲ್ಲ:‘ತಿರುಪತಿಯ ತಿರುಮಲ ದೇಗುಲದ ಮಾದರಿಯಲ್ಲಿ ಇಲ್ಲಿಯೂ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಿಲ್ಲ. ಶಬರಿಮಲೆ ಪರಿಸರ ಅಲ್ಲಿಗಿಂತ ಭಿನ್ನವಾಗಿದೆ.

ದಿನಕ್ಕೆ 20ರಿಂದ 30 ಸಾವಿರ ಭಕ್ತರು ಮಾತ್ರ ಭೇಟಿ ನೀಡುವಂತೆ ನಿಯಂತ್ರಿಸಲು ಪ್ರಸ್ತಾವ ಇರಿಸಲಾಗಿದೆ. ಆದರೆ ಕಳೆದ ಮಕರ ಸಂಕ್ರಾಂತಿಯಲ್ಲಿ ಒಂದೇ ದಿನ 4 ಲಕ್ಷಕ್ಕೂ ಹೆಚ್ಚು ಜನ ಇಲ್ಲಿಗೆ ಭೇಟಿ ನೀಡಿದ್ದರು. ಅಲ್ಲದೆ ದರ್ಶನ ಪಡೆಯಲುಆನ್‌ಲೈನ್‌ ವ್ಯವಸ್ಥೆ ಅಡಿ ಶುಲ್ಕ ವಿಧಿಸುವುದಕ್ಕೆ ನಮ್ಮ ವಿರೋಧ ಇದೆ. ದೇಗುಲ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರ ಟಿಡಿಬಿಗೆ ಮಾತ್ರ ಇರುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.