ನವದೆಹಲಿ: ನೂತನ ಕೃಷಿ ಕಾಯ್ದೆಗಳ ರದ್ದತಿಗಾಗಿ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಮಂಗಳವಾರದ ‘ಭಾರತ್ ಬಂದ್‘ಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸುವಂತೆ ರೈತ ಪರ ಹೋರಾಟಗಾರರು ಮನವಿ ಮಾಡಿದ್ದಾರೆ.
‘ಭಾರತ್ ಬಂದ್‘ಗೆ ವಿವಿಧ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿರುವುದನ್ನು ರೈತ ಸಂಘಟನೆಗಳು ಸ್ವಾಗತಿಸಿವೆ. ಸಾರ್ವಜನಿಕರೂ ಬಂದ್ ಬೆಂಬಲಿಸುವಂತೆ ಮನವಿ ಮಾಡಿವೆ.
‘ಭಾರತ್ ಬಂದ್‘ಗೆ ಈಗಾಗಲೇ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಸಮಾಜವಾದಿ ಪರ್ಟಿ, ಬಹುಜನ ಸಮಾಜವಾದಿ ಪಾರ್ಟಿ, ಎನ್ಸಿಪಿ, ಸಿಪಿಐ(ಎಂ) ಮತ್ತು ಡಿಎಂಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಿಗಳು ಬೆಂಬಲ ವ್ಯಕ್ತಪಡಿಸಿವೆ.
ಕೃಷಿ ಕಾಯ್ದೆಗಳ ರದ್ದತಿಗೆ ಸಂಬಂಧಿಸಿದಂತೆ ಇಲ್ಲಿವರೆಗೂ ರೈತ ನಾಯಕರು ಮತ್ತು ಸರ್ಕಾರದ ನಡುವೆ ನಡೆದಿರುವ ಮಾತುಕತೆಗಳು ವಿಫಲಗೊಂಡಿದೆ. ಆರನೇ ಸುತ್ತಿನ ಮಾತುಕತೆ ಬುಧವಾರ ನಿಗದಿಯಾಗಿದೆ.
ಈ ನಡುವೆ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಗಡಿಭಾಗಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದ್ದಾರೆ. ಸಿಂಘು, ಔಚಾಂಡಿ, ಪಿಯಾವೊಮನಿಯಾರಿ ಮತ್ತು ಮಂಗೇಶ್, ಟಿಕ್ರಿ ಮತ್ತು ಜೋರ್ಡಾ ಗಡಿಗಳನ್ನು ಮುಚ್ಚಿರುವುದಾಗಿ ದೆಹಲಿ ಪೊಲೀಸರು ಸೋಮವಾರ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 44 ರ ಎರಡೂ ಕಡೆಯಲ್ಲೂ ಬಂದ್ ಮಾಡಲಾಗಿದೆ. ಹಾಗಾಗಿ ಈ ಹೆದ್ದಾರಿಯಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸುವವರು ಪರ್ಯಾಯ ಮಾರ್ಗವಾದ ಲಾಂಪುರ್, ಸಫಾಯಿಬಾದ್ ಮತ್ತು ಸೊಬೊಲಿ ಗಡಿ ಭಾಗದಲ್ಲಿ ಪ್ರಯಾಣಿಸಬೇಕೆಂದು ತಿಳಿಸಿದ್ದಾರೆ. ನೋಯ್ಡಾ – ದೆಹಲಿ ಮಾರ್ಗವನ್ನೂ ಬಂದ್ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.