ಪುಣೆ: ಇಲ್ಲಿನ ‘ಎಸ್ವಿಎಸ್ ಅಕ್ವಾ ಟೆಕ್ನಾಲಜೀಸ್’ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 17 ಮಂದಿ ಮೃತಪಟ್ಟಿದ್ದು, ಸಂತ್ರಸ್ತರಿಗಾಗಿ ಮಂಗಳವಾರವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
‘ಅಲ್ಲದೆ ಈ ಕಾರ್ಖಾನೆಯಲ್ಲಿ ಯಾವ ರೀತಿಯ ಸಾಮಾಗ್ರಿಗಳನ್ನು ಬಳಸಲಾಗುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಕಾರ್ಖಾನೆ ಮಾಲೀಕನಿಗೆ ಸಮನ್ಸ್ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಮುಲ್ಶಿಯ ಪಿರಂಗುಟ್ ಎಂಐಡಿಸಿ ಪ್ರದೇಶದಲ್ಲಿರುವ ‘ಎಸ್ವಿಎಸ್ ಅಕ್ವಾ ಟೆಕ್ನಾಲಜೀಸ್’ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ದುರಂತ ಸಂಭವಿಸಿದೆ. ಈ ಕಾರ್ಖಾನೆಯಲ್ಲಿ ಕ್ಲೋರಿನ್ ಡೈಆಕ್ಸೈಡ್ ತಯಾರಿಸಲಾಗುತ್ತದೆ.
ಸೋಮವಾರ ತಡರಾತ್ರಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿ ಸಂತ್ರಸ್ತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
‘ಶೋಧ ಕಾರ್ಯಾಚರಣೆ ವೇಳೆ ಸುಟ್ಟು ಕರಕಲಾದ 17 ದೇಹಗಳು ಸಿಕ್ಕಿವೆ. ಕಾರ್ಖಾನೆ ಮಾಲೀಕರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ದೇಶ್ಮುಖ್ ಅವರು ಮಾಹಿತಿ ನೀಡಿದರು.
ಈ ಘಟನೆ ಸಂಬಂಧ ತನಿಖೆಯನ್ನು ಆರಂಭಿಸಿದ್ಧೇವೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್(ಎಸ್ಡಿಎಂ) ಸಂದೇಶ್ ಶಿಕ್ರೆ ಅವರು ತಿಳಿಸಿದರು.
ಪುಣೆ ರಾಸಾಯನಿಕ ಕಾರ್ಖಾನೆ ಅಗ್ನಿ ದುರಂತದ ಬಗ್ಗೆ ತನಿಖೆ ನಡೆಸಲು ಎಸ್ಡಿಎಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
‘ಪ್ಯಾಕಿಂಗ್ ಸೆಕ್ಷನ್ನಲ್ಲಿ ಮೊದಲು ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು, ಕೋಣೆಯ ಸುತ್ತಲೂ ಪ್ಲಾಸ್ಟಿಕ್ ಇದ್ದಿದ್ದರಿಂದ ಬೆಂಕಿ ಬೇರೆ ಕಡೆಗೂ ವ್ಯಾಪಿಸಿತು’ ಎಂದು ಅವರು ಈ ಹಿಂದೆ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.