ಪುಣೆ: ‘ನಕ್ಸಲರಿಗಾಗಿ ನೇಪಾಳದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿದ್ದರಲ್ಲಿತೆಲುಗು ಕ್ರಾಂತಿಕಾರಿ ಕವಿ ವರವರ ರಾವ್ ಅವರ ನೇರ ಪಾತ್ರವಿದೆ’ ಎಂದು ಮಹಾರಾಷ್ಟ್ರ ಪೊಲೀಸರು ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಕ್ಸಲರ ಜತೆ ಸಂಪರ್ಕ ಹೊಂದಿರುವ ಮತ್ತು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ವರವರ ರಾವ್ ಗೃಹ ಬಂಧನದಲ್ಲಿದ್ದರು. ಗೃಹ ಬಂಧನದ ಅವಧಿ ನವೆಂಬರ್ 15ಕ್ಕೆ ಕೊನೆಯಾಗಿತ್ತು. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಪುಣೆ ಜಿಲ್ಲಾ ನ್ಯಾಯಾಧೀಶರ ಮುಂದೆ ಭಾನುವಾರ ಹಾಜರುಪಡಿಸಿದ್ದರು.
ರಾವ್ ಅವರನ್ನು ಪೊಲೀಸ್ ಬಂಧನಕ್ಕೆ ನೀಡಬೇಕು ಎಂದು ಮನವಿ ಸಲ್ಲಿಸುವಾಗ ನ್ಯಾಯಾಧೀಶರಿಗೆ ಪೊಲೀಸರು ಈ ಮಾಹಿತಿ ನೀಡಿದ್ದಾರೆ.
‘ನಕ್ಸಲ್ ನಾಯಕ ಗಣಪತಿ ಜತೆ ವರವರ ರಾವ್ ಅವರು ಇ–ಮೇಲ್ ವ್ಯವಹಾರ ನಡೆಸಿದ್ದಾರೆ. ಇ–ಮೇಲ್ನಲ್ಲಿ ಹಲವು ಸಂಕೇತಪದಗಳನ್ನು ಬಳಸಲಾಗಿದೆ. ಈ ವಿಚಾರದಲ್ಲಿ ರಾವ್ ಅವರ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಅವರನ್ನು ಪೊಲೀಸ್ ಬಂಧನಕ್ಕೆ ಒಪ್ಪಿಸಬೇಕು’ ಎಂದು ಸರ್ಕಾರಿ ವಕೀಲರು ವಾದಿಸಿದರು.
ರಾವ್ ಅವರನ್ನು ನವೆಂಬರ್ 26ರವರೆಗೆ ಪೊಲೀಸ್ ಬಂಧನಕ್ಕೆ ನೀಡಲಾಗಿದೆ.
‘ವರವರ ರಾವ್ ಸೇರಿದಂತೆ ಐದೂ ಆರೋಪಿಗಳ ವಿರುದ್ಧದ ಆರೋಪಪಟ್ಟಿಯಲ್ಲಿ ದೇಶದ್ರೋಹ, ಸರ್ಕಾರದ ವಿರುದ್ಧ ಸಂಚು ರೂಪಿಸಿದ ಸೆಕ್ಷನ್ಗಳನ್ನು ಸೇರಿಸಲಾಗಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.