ADVERTISEMENT

ಪಂಜಾಬ್ ಕಾಂಗ್ರೆಸ್‌ನಲ್ಲಿ ಒಳಜಗಳ: ಅಮರೀಂದರ್ ಸಿಂಗ್–ಸೋನಿಯಾ ಇಂದು ಭೇಟಿ ಸಾಧ್ಯತೆ

ಪಿಟಿಐ
Published 6 ಜುಲೈ 2021, 1:41 IST
Last Updated 6 ಜುಲೈ 2021, 1:41 IST
ಪಿಟಿಐ ಸಂಗ್ರಹ ಚಿತ್ರ
ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ಪಂಜಾಬ್ ಕಾಂಗ್ರೆಸ್‌ನಲ್ಲಿ ಒಳಜಗಳಗಳ ಮಧ್ಯೆ ಮಂಗಳವಾರ ಸಿಎಂ ಅಮರೀಂದರ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಮಂಗಳವಾರ ಬೆಳಗ್ಗೆ ಸಿಂಗ್ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ,

2015ರಲ್ಲಿ ಸಿಖ್ ಗ್ರಂಥಗಳಿಗೆ ಅಪವಿತ್ರತೆ ಪ್ರಕರಣ ಮತ್ತು ನಂತರ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿ ಬಗ್ಗೆ ತನಿಖೆ ಪೂರ್ಣಗೊಳಿಸಲು ವಿಳಂಬವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ADVERTISEMENT

ಪಕ್ಷದ ಹೈಕಮಾಂಡ್, ಪಂಜಾಬ್ ಘಟಕದಲ್ಲಿನ ಆಂತರಿಕ ಬಿರುಕನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಇರುವುದರಿಂದ ಪಕ್ಷದಲ್ಲಿ ಬದಲಾವಣೆ ಮಾಡುವ ಮಾತುಗಳನ್ನು ಆಡುತ್ತಿದೆ.

ಈ ಬದಲಾವಣೆ ವೇಳೆ ಸಿಧು ಅವರಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳೂ ಇವೆ.

ಕೆಲ ದಿನಗಳ ಹಿಂದಷ್ಟೇ, ಸಿಧು ಅವರು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು.

ಜೂನ್ 22 ರಂದು ಅಮರಿಂದರ್ ಸಿಂಗ್ ಅವರು, ಪಂಜಾಬ್ ಕಾಂಗ್ರೆಸ್‌ನಲ್ಲಿನ ಒಳಜಗಳನ್ನು ಬಗೆಹರಿಸಲು ರಚಿಸಲಾದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಮೂವರು ಸದಸ್ಯರ ಎಐಸಿಸಿ ಸಮಿತಿಯ ಮುಂದೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.