ADVERTISEMENT

ಪಂಜಾಬ್‌: ಚನ್ನಿ ಸಂಬಂಧಿಗೆ ಸೇರಿದ ₹8 ಕೋಟಿ ಜಪ್ತಿ

ಜಾರಿ ನಿರ್ದೇಶನಾಲಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 19:32 IST
Last Updated 19 ಜನವರಿ 2022, 19:32 IST
ಚರಣ್‌ಜಿತ್ ಸಿಂಗ್ ಚನ್ನಿ
ಚರಣ್‌ಜಿತ್ ಸಿಂಗ್ ಚನ್ನಿ   

ನವದೆಹಲಿ: ಮರಳುಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ವಶಪಡಿಸಿಕೊಂಡಿದ್ದ ₹10 ಕೋಟಿ ಪೈಕಿ ₹8 ಕೋಟಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸಂಬಂಧಿಗೆ ಸೇರಿದ್ದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಉಳಿದ ₹ 2 ಕೋಟಿ ಹಣವನ್ನು ಸಂದೀಪ್ ಕುಮಾರ್ ಎಂಬುವರಿಂದ ಜಪ್ತಿ ಮಾಡಲಾಗಿದೆ. ಇತರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಇ.ಡಿ. ಸಮನ್ಸ್ ಜಾರಿಗೊಳಿಸುವ ಸಾಧ್ಯತೆಯಿದೆ.

ಚನ್ನಿ ಅವರ ಸಂಬಂಧಿ ಭೂಪೀಂದರ್ ಸಿಂಗ್ ಹನಿ ಅವರಿಗೆ ಸೇರಿದ ಜಾಗಗಳು ಸೇರಿದಂತೆ, ಚಂಡೀಗಡ, ಮೊಹಾಲಿ, ಲುಧಿಯಾನ ಹಾಗೂ ಪಠಾಣ್‌ಕೋಟ್‌ನ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ಮಂಗಳವಾರ ಶೋಧ ನಡೆಸಿದ್ದರು. ಈ ಶೋಧ ಕಾರ್ಯಾಚರಣೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ದೇಶದ ಏಕೈಕ ದಲಿತ ಮುಖ್ಯಮಂತ್ರಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು 2018ರಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಇ.ಡಿ. ಶೋಧ ಕಾರ್ಯಾಚರಣೆ ನಡೆದಿದೆ.ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕುದ್ರತ್‌ದೀಪ್ ಸಿಂಗ್ ಜೊತೆ ಹನಿ ಅವರ ನಂಟಿನ ಕುರಿತು ಸಂಸ್ಥೆ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಂಗ್ ಮತ್ತು ಹನಿ ವ್ಯಾಪಾರದಲ್ಲಿ ಪಾಲುದಾರರು ಎಂದು ಅವರು ಹೇಳಿದ್ದಾರೆ. ಯಾವುದೇ ತಪ್ಪು ಮಾಡಿಲ್ಲ ಎಂದು ಮುಖ್ಯಮಂತ್ರಿ
ಚನ್ನಿ ಮತ್ತು ಹನಿ ಇಬ್ಬರೂ ಸ್ಪಷ್ಟ‍ಪಡಿ
ಸಿದ್ದಾರೆ.

ADVERTISEMENT

ಗಣಿಗಾರಿಕೆಗೆ ಉದ್ದೇಶಿಸಿದ್ದ ಜಾಗಗಳನ್ನು ಬಿಟ್ಟು ಇತರೆಡೆ ಮರಳು ಗಣಿಗಾರಿಕೆ ನಡೆಸಲಾಗಿದ್ದು, ಇದರಲ್ಲಿ ತೊಡಗಿರುವ ಮಾಫಿಯಾದವರು ಹಣವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.