ADVERTISEMENT

ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್‌ ಮಾಜಿ ಸಚಿವ ಸಾಧು ಸಿಂಗ್‌ ಬಂಧನ

ಏಜೆನ್ಸೀಸ್
Published 7 ಜೂನ್ 2022, 3:17 IST
Last Updated 7 ಜೂನ್ 2022, 3:17 IST
ಸಾಧು ಸಿಂಗ್‌ ಧರಮ್ಸೋಟ್‌  (ಚಿತ್ರ: facebook.com/s.sadhusinghdharamsot)
ಸಾಧು ಸಿಂಗ್‌ ಧರಮ್ಸೋಟ್‌ (ಚಿತ್ರ: facebook.com/s.sadhusinghdharamsot)   

ಚಂಡೀಗಡ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್‌ ವಿಚಕ್ಷಣ ದಳ (ವಿ.ಬಿ) ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಸಾಧು ಸಿಂಗ್‌ ಧರಮ್ಸೋಟ್‌ ಅವರನ್ನು ಮಂಗಳವಾರ ಮುಂಜಾನೆ ಬಂಧಿಸಿದೆ.

ಸಾಧು ಸಿಂಗ್‌ ಅವರು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸಂಪುಟದಲ್ಲಿ ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಇವರ ಸಹಚರರಾದ ಸ್ಥಳೀಯ ಪತ್ರಕರ್ತ ಕಮಲ್ಜಿತ್ ಸಿಂಗ್ ಅವರನ್ನೂ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಮಾಹಿತಿ ಖಚಿತಪಡಿಸಿರುವ ವಿ.ಬಿ ಅಧಿಕಾರಿ, ’ಇಬ್ಬರನ್ನು ಭ್ರಷ್ಟಾಚಾರದ ಆರೋಪದಡಿಯಲ್ಲಿ ಬಂಧಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಮರ ಕಡಿಯುವುದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಾಧು ಸಿಂಗ್‌ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಮುಖ್ಯಮಂತ್ರಿ ಭಗವಂತ್‌ ಮಾನ್‌ ಇತ್ತೀಚೆಗಷ್ಟೇ ಹೇಳಿದ್ದರು.

ಇದೇ ಪ್ರಕರಣದಲ್ಲಿ ಕಳೆದ ವಾರ ವಿ.ಬಿ ಅಧಿಕಾರಿಗಳು ವಿಭಾಗೀಯ ಅರಣ್ಯ ಅಧಿಕಾರಿ ಗುರ್ನಾಮ್‌ಪ್ರೀತ್‌ ಸಿಂಗ್ ಮತ್ತು ಹರ್ಮಿಂದರ್ ಸಿಂಗ್ ಹುಮ್ಮಿ ಎಂಬುವವರನ್ನು ಬಂಧಿಸಿದ್ದರು. ಅವರು ನೀಡಿರುವ ಮಾಹಿತಿಯ ಆಧಾರದ ಮೇಲೆ ಸಾಧು ಸಿಂಗ್‌ ಅವರ ವಿರುದ್ಧ ವಿ.ಬಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿ ಮರ ಕಡಿಯುವಾಗಲೂ ಸಾಧು ಸಿಂಗ್‌ಗೆ ಹಣ ಹೋಗುತ್ತಿತ್ತು. ಸ್ಥಳೀಯ ಪತ್ರಕರ್ತ ಕಮಲ್‌ಜಿತ್ ಮೂಲಕ ಹರ್ಮಿಂದರ್‌ ಸಿಂಗ್‌ ಹಮ್ಮಿ, ಸಾಧು ಸಿಂಗ್‌ಗೆ ಲಂಚ ನೀಡುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

25 ಸಾವಿರ ಮರಗಳನ್ನು ಅಕ್ರಮವಾಗಿ ಕಡಿದ ಆರೋಪ ಸಾಧು ಸಿಂಗ್‌ ಅವರ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.