ADVERTISEMENT

ಅರ್ಹತೆ ಇಲ್ಲದೆಯೂ ಕಿಸಾನ್ ಯೋಜನೆಯಡಿ ಹಣ ಪಡೆದ ರೈತರು: ಟಾಪ್ 5ರಲ್ಲಿ ಕರ್ನಾಟಕ

ಶೆಮಿಜ್‌ ಜಾಯ್‌
Published 11 ಜನವರಿ 2021, 6:05 IST
Last Updated 11 ಜನವರಿ 2021, 6:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪಿಎಂ-ಕಿಸಾನ್ ಯೋಜನೆಯಡಿ ಅರ್ಹತೆ ಇಲ್ಲದೆಯೇ ರೈತರು ಸರ್ಕಾರದಿಂದ ಅತಿ ಹೆಚ್ಚು ಹಣವನ್ನು ಜೇಬಿಗಿಳಿಸಿದ ಅಗ್ರ ಐದು ರಾಜ್ಯಗಳಲ್ಲಿ ಪಂಜಾಬ್, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿವೆ ಎಂದು ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗಗೊಂಡಿದೆ.

ಒಟ್ಟಾರೆಯಾಗಿ, 2020 ಜುಲೈ 31 ರವರೆಗೆ ಯೋಜನೆಯಡಿ ಐದು ಪ್ರಮುಖ ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ 20.48 ಲಕ್ಷ ಅನರ್ಹ ರೈತರಿಗೆ ₹1,364.13 ಕೋಟಿ ಹಣವನ್ನು 68.20 ಲಕ್ಷ ಕಂತುಗಳಲ್ಲಿ ವಿತರಿಸಲಾಗಿದೆ. ವಿತರಿಸಲಾದ ಒಟ್ಟು ನಿಧಿಯ 67.92% ಅಥವಾ 926.56 ಕೋಟಿ ರೂ. ಅನರ್ಹ ರೈತರ ಪಾಲಾಗಿದೆ.

ಅರ್ಹತೆೆ ಇಲ್ಲದಿದ್ದರೂ ಪಿಎಂ ಕಿಸಾನ್ ಯೋಜನೆಯಡಿ ಹಣ ಜೇಬಿಗಿಳಿಸಿದ ರೈತರ ಪೈಕಿ ಪಂಜಾಬ್ ಮೊದಲ ಸ್ಥಾನದಲ್ಲಿದ್ದು ಇಲ್ಲಿ 4.194 ಲಕ್ಷ ಕಂತುಗಳಲ್ಲಿ 4.74 ಲಕ್ಷ ಪಂಜಾಬ್ ರೈತರು ಅತಿ ಹೆಚ್ಚು ₹ 323.85 ಕೋಟಿ ಹಣ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ(10.84 ಕಂತುಗಳಲ್ಲಿ 2.86 ಲಕ್ಷ ರೈತರಿಗೆ ₹ 216.90 ಕೋಟಿ) ಇದೆ, ಮೂರನೇ ಸ್ಥಾನದಲ್ಲಿ ಗುಜರಾತ್ (8.11 ಲಕ್ಷ ಕಂತುಗಳಲ್ಲಿ 1.64 ಲಕ್ಷ ರೈತರಿಗೆ ₹ 162.34 ಕೋಟಿ) ಮತ್ತು ಉತ್ತರ ಪ್ರದೇಶ (7.30 ಲಕ್ಷ ಕಂತುಗಳಲ್ಲಿ 1.64 ಲಕ್ಷ ರೈತರಿಗೆ 146.01 ₹ ಕೋಟಿ ) 4ನೇ ಸ್ಥಾನದಲ್ಲಿದೆ.

ADVERTISEMENT

ಕರ್ನಾಟಕ ರಾಜ್ಯ ಐದನೇ ಸ್ಥಾನದಲ್ಲಿದ್ದು, 86,419 ರೈತರು ಅರ್ಹತೆೆ ಇಲ್ಲದಿದ್ದರೂ ₹ 77.44 ಕೋಟಿ ಹಣವನ್ನು 3.87 ಲಕ್ಷ ಕಂತುಗಳಲ್ಲಿ ಪಡೆದಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆ ಉತ್ತರ ನೀಡಿದೆ.

ಅನುಪಾತ ನೋಡುವುದಾದರೆ, ಪಂಜಾಬ್‌ನಲ್ಲಿ ಪಿಎಂ-ಕಿಸಾನ್‌ ಯೋಜನೆಯಡಿ ನೋಂದಾಯಿಸಲ್ಪಟ್ಟ ಪ್ರತಿ ಐದು ರೈತರಲ್ಲಿ ಶೇ. 19.98% ಅಥವಾ ಬಹುತೇಕ ಒಬ್ಬ ರೈತ ಅರ್ಹರಲ್ಲ, ಮಹಾರಾಷ್ಟ್ರದಲ್ಲಿ ೀ ಪ್ರಮಾಣ 2.53%, ಗುಜರಾತ್‌ನಲ್ಲಿ 2.66%, ಉತ್ತರ ಪ್ರದೇಶದಲ್ಲಿ 0.6% ಮತ್ತು ಕರ್ನಾಟಕದಲ್ಲಿ 1.53%. ರಷ್ಟಿದೆ. ಒಟ್ಟಾರೆ. 10.47 ಕೋಟಿ ಫಲಾನುಭವಿಗಳ ಪೈಕಿ ಶೇ. 1.95% ರಷ್ಟು ರೈತರು ಈ ಯೋಜನೆಗೆ ಅರ್ಹರಾಗಿಲ್ಲ.

ಸಿಕ್ಕಿಂನಲ್ಲಿ ಕೇವಲ ಒಬ್ಬ ಅರ್ಹತೆ ಇಲ್ಲದರೈತ ಐದು ಕಂತುಗಳಲ್ಲಿ ₹ 10,000 ಹಣ ಪಡೆದಿರುವುದಾಗಿ ವರದಿಯಾಗಿದೆ. ಮೇಘಾಲಯ (21), ಅರುಣಾಚಲ ಪ್ರದೇಶ (70) ಮತ್ತು ನಾಗಾಲ್ಯಾಂಡ್ (89) ರಾಜ್ಯಗಳಲ್ಲಿ ಸಹ ಕಡಿಮೆ ಸಂಖ್ಯೆಯ ಅರ್ಹತೆ ಇಲ್ಲದಿದ್ದರೂ ಪಿಎಂ ಕಿಸಾನ್ ಯೋಜನೆಯಡಿ ಹಣ ಸ್ವೀಕರಿಸಿದವರಿದ್ದಾರೆ.

ಅನರ್ಹ ರೈತರ ಸಂಖ್ಯೆ ವಿಷಯಕ್ಕೆ ಬಂದಾಗ, ಪಂಜಾಬ್‌ನಲ್ಲಿ ಅತಿ ಹೆಚ್ಚು 23.16%, ಅಸ್ಸಾಂ (3.45 ಲಕ್ಷ ಅಥವಾ 16.87%) ಮತ್ತು ಮಹಾರಾಷ್ಟ್ರ 13.99% ರಷ್ಟಿದೆ. ಈ ಮೂರು ರಾಜ್ಯಗಳಲ್ಲೆ ಅರ್ಹತೆ ಇಲ್ಲದೆ ಹಣ ಪಡೆದ ರೈತರ ಸಂಖ್ಯೆ ಒಟ್ಟು ಸಂಖ್ಯೆಯ 54.03% ರಷ್ಟಿದೆ.

8.05% ರೊಂದಿಗೆ ಗುಜರಾತ್ ನಾಲ್ಕನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶದಲ್ಲಿ 8.01% ರಷ್ಟಿದೆ. ಕರ್ನಾಟಕ ಸೇರಿದಂತೆ ಇತರ ಎಲ್ಲ ರಾಜ್ಯಗಳಲ್ಲಿ ಈ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆಯಿದೆ.

ಸಂಕಷ್ಟದಲ್ಲಿದ್ದ ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ ₹ 6,000 ಗಳನ್ನು ಒದಗಿಸಲು 2019 ರ ಫೆಬ್ರುವರಿಯಲ್ಲಿ ಆರಂಭಿಸಲಾದ ಪಿಎಂ-ಕಿಸಾನ್ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯಲ್ಲಿ ಸಾಂಸ್ಥಿಕ ಭೂಮಾಲೀಕರಾಗಿರುವ ರೈತರು, ಆದಾಯ ತೆರಿಗೆ ಪಾವತಿಸುವವರು, ವೃತ್ತಿಪರರು, ಮಾಜಿ ಮತ್ತು ಹಾಲಿ ಸಚಿವರು, ಸಂಸದರು ಮತ್ತು ಶಾಸಕರು, ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದವರು, ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ಮತ್ತು ₹ 10,000ಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವವರೆಲ್ಲರನ್ನೂ ಯೋಜನೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. .

ಯೋಜನೆಗೆ ಫಲಾನುಭವಿಗಳ ನೋಂದಣಿ ಮತ್ತು ಹಣ ಪಾವತಿಗೆ ಡಿಜಿಟಲ್ ಮೂಲಸೌಕರ್ಯ ಬಳಕೆ ಹೊರತಾಗಿಯೂ 20 ಲಕ್ಷಕ್ಕೂ ಹೆಚ್ಚು ಅನರ್ಹ ವ್ಯಕ್ತಿಗಳನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ನಾಯಕ್ ಹೇಳಿದ್ದಾರೆ. ಅನರ್ಹರೆಂದು ಪತ್ತೆಹಚ್ಚುವ ಹೊತ್ತಿಗೆ ಕೆಲವಡೆ ಎಲ್ಲ ಐದು ಕಂತುಗಳನ್ನು ಪಾವತಿಸಲಾಗಿದೆ ಎಂದು ತಿಳಿದು ಬಂದಿದೆ. ಇತರ ಸಂದರ್ಭಗಳಲ್ಲಿ, 1-2 ಕಂತುಗಳನ್ನು ಪಾವತಿಸಿದ ಬಳಿಕ ಅನರ್ಹರನ್ನು ಪತ್ತೆ ಮಾಡಲಾಗಿದೆ.

ಅನರ್ಹರಿಗೆ ಪಾವತಿಯಾದ ಹಣ ಹಿಂಪಡೆಯುವ ಬಗ್ಗೆ ವರದಿಗಳು ಇದ್ದರೂ, ನಮ್ಮ ವಿಶಾಲ ಭೌಗೋಳಿಕ ವ್ಯವಸ್ಥೆಯಲ್ಲಿ ಈ ದೊಡ್ಡ ಮೊತ್ತವನ್ನು ವಸೂಲಿ ಮಾಡುವುದು ಕಠಿಣ ಕೆಲಸವಾಗಿದೆ ಎಂದು ನಾಯಕ್ ಅಭಿಪ್ರಾಯಪಟ್ಟಿದ್ದಾರೆ. "2020 ರಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಕೃಷಿ ಸಮುದಾಯ ಅನುಭವಿಸಿದ ಆರ್ಥಿಕ ತೊಂದರೆಯು ಈ ಕಾರ್ಯಕ್ಕೆ ಮತ್ತಷ್ಟು ಕಠಿಣ ಸವಾಲಾಗಿದೆ" ಎಂದು ಅವರು ಹೇಳುತ್ತಾರೆ. ಅಧಿಕೃತ ಆಂತರಿಕ ಪತ್ರ ವ್ಯವಹಾರದ ಮಾಹಿತಿ ಪ್ರಕಾರ, ಅನರ್ಹರಿಂದ ಹಣ ವಾಪಸ್ ಪಡೆಯುವ ಕುರಿತ ಡೇಟಾಬೇಸ್ ನಿರ್ವಹಣೆಯನ್ನು ಅಧಿಕಾರಿಗಳು ಇನ್ನಷ್ಟೇ ಪ್ರಾರಂಭಿಸಬೇಕಿದೆ.

ಅನರ್ಹ ರೈತರ ಮಾಹಿತಿಯನ್ನು ಇಲಾಖೆ ಎರಡು ಹಂತಗಳಲ್ಲಿ ನೀಡಿದ್ದು, ಅನರ್ಹ ರೈತರು ಮತ್ತು ಆದಾಯ ತೆರಿಗೆ ಪಾವತಿಸುವ ರೈತರು. ಒಂದು ಅಥವಾ ಹೆಚ್ಚಿನ ವಿಭಾಗಗಳಲ್ಲಿ ಬರುವ ಆದಾಯ-ತೆರಿಗೆ ಪಾವತಿಸುವ ರೈತರನ್ನು ಹೊರತುಪಡಿಸಿ ಉಳಿದವರೆಲ್ಲರೂ ಅನರ್ಹ ರೈತರ ಅಡಿಯಲ್ಲಿ ಸೇರಿಸಿಕೊಳ್ಳಲಾಗಿದೆ.

"₹ 985.09 ಕೋಟಿ ಅಥವಾ 72.28% ಹಣ ಐಟಿ ಪಾವತಿಸುವ ರೈತರಿಗೆ ಹೋಗಿದ್ದರೆ, "ಅನರ್ಹ ರೈತರು" ವಿಭಾಗದಲ್ಲಿರುವವರಿ್ಗ ₹ 379.03 ಕೋಟಿ ಪಾವತಿಯಾಗಿದೆ.

ಅರ್ಹತೆ ಇಲ್ಲದೆಯೂ ಪಿಎಂ ಕಿಸಾನ್ ಯೋಜನೆ ಅಡಿ ಹಣ ಪಡೆದ 55.58% ಅಥವಾ 11.33 ಲಕ್ಷ ರೈತರು "ಐಟಿ ಪಾವತಿಸುವ ರೈತರು" ವಿಭಾಗಕ್ಕೆ ಸೇರಿದವರಾಗಿದ್ದಾರೆ ಎಂದು ಆರ್‌ಟಿಐ ತೋರಿಸಿದೆ, ಇದರಲ್ಲಿ ಮಹಾರಾಷ್ಟ್ರವು 2.18 ಲಕ್ಷ ಫಲಾನುಭವಿಗಳೊಂದಿಗೆ (194.18 ಕೋಟಿ ರೂ.) ಅಗ್ರಸ್ಥಾನದಲ್ಲಿದೆ ಮತ್ತು 68,224 (₹ 22.72 ಕೋಟಿ.) ಅನರ್ಹ ರೈತರ ವಿಭಾಗದಲ್ಲಿದ್ದಾರೆ ಎಂದು ಗುರುತು ಮಾಡಲಾಗಿದೆ.

1.63 ಲಕ್ಷ ಐಟಿ ಪಾವತಿಸುವ ರೈತರೊಂದಿಗೆ (₹145.44 ಕೋಟಿ ಪಡೆದ) ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ, 791 ರೈತರು (₹ 57.06 ಲಕ್ಷ .) ಮಾತ್ರ "ಅನರ್ಹ" ವರ್ಗಕ್ಕೆ ಸೇರಿದವರು. ಕರ್ನಾಟಕದಲ್ಲಿ 86,266 (₹ 77.33 ಕೋಟಿ ) ಆದಾಯ ತೆರಿಗೆ ಪಾವತಿಸುವ ರೈತರು ಪಿಎಂ-ಕಿಸಾನ್ ಹಣವನ್ನು ಪಡೆದಿದ್ದರೆ, ಅನರ್ಹ ರೈತ ವಿಭಾಗದಲ್ಲಿ ಕೇವಲ 153 (₹11.44 ಲಕ್ಷ ) ಮಂದಿ ಅನರ್ಹತೆ ಪಟ್ಟಿಯಲ್ಲಿದ್ದಾರೆ.

"ಅನರ್ಹ ರೈತರು" ವಿಭಾಗದಲ್ಲಿ 4.42 ಲಕ್ಷ ಫಲಾನುಭವಿಗಳೊಂದಿಗೆ ರಾಜ್ಯಗಳ ಪಟ್ಟಿಯಲ್ಲಿ ಪಂಜಾಬ್ ಅಗ್ರಸ್ಥಾನದಲ್ಲಿದ್ದರೆ, ಇಲ್ಲಿಕೇವಲ 32,166 ಫಲಾನುಭವಿಗಳು ಮಾತ್ರ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ.

"ಐಟಿ ಪಾವತಿಸುವ ರೈತರು" ವಿಭಾಗದಲ್ಲಿ, ಮಹಾರಾಷ್ಟ್ರದ ರೈತರು ಅತಿ ಹೆಚ್ಚು 9.70 ಲಕ್ಷ ಕಂತುಗಳಲ್ಲಿ ಹಣ ಪಡೆದಿದ್ದಾರೆ. ಗುಜರಾತ್ 8.06 ಲಕ್ಷ ಕಂತುಗಳನ್ನು ಪಡೆದಿದೆ. 7.27 ಲಕ್ಷ ಕಂತುಗಳೊಂದಿಗೆ ಉತ್ತರ ಪ್ರದೇಶ ಮೂರನೇ ಸ್ಥಾನವನ್ನು ಪಡೆದರೆ, 3.86 ಲಕ್ಷ ಕಂತುಗಳೊಂದಿಗೆ ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ ಮತ್ತು ತಮಿಳುನಾಡು 3.49 ಲಕ್ಷ ಕಂತುಗಳೊಂದಿಗೆ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಅನರ್ಹ ರೈತರ ವಿಭಾಗದ ಸರಾಸರಿಗೆ ಸಂಬಂಧಿಸಿದಂತೆ, ತೆಲಂಗಾಣದಲ್ಲಿ ಹಣ ಸ್ವೀಕರಿಸುವವರು ತಲಾ ನಾಲ್ಕು ಕಂತುಗಳಿಗಿಂತ ಹೆಚ್ಚಿದ್ದರೆ, ಕರ್ನಾಟಕ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ನಾಗಾಲ್ಯಾಂಡ್, ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ತ್ರಿಪುರ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ರೈತರು ಮೂರು ಅಥವಾ ಹೆಚ್ಚಿನ ಕಂತುಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.