ADVERTISEMENT

ಕ್ವಾರಂಟೈನ್‌: ಏನು ಎತ್ತ? ನಿಗಾ ಅವಧಿ ಹೆಚ್ಚಳ

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಗಾ ಅವಧಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 19:34 IST
Last Updated 19 ಏಪ್ರಿಲ್ 2020, 19:34 IST
   
""
""
""
""

ಬೆಂಗಳೂರು: ಕೊರೊನಾ ಸೋಂಕು ರಾಜ್ಯದಲ್ಲಿ ಹತ್ತು ತಿಂಗಳ ಮಗುವಿನಿಂದ ಹಿಡಿದು ಎಂಬತ್ತು ವರ್ಷದ ವೃದ್ಧರನ್ನೂ ಕಾಡುತ್ತಿದೆ. ವೇಗವಾಗಿ ಹರಡುತ್ತಿರುವ ಈ ಸೋಂಕನ್ನು ನಿಯಂತ್ರಣಕ್ಕೆ ತರುವುದು ವೈದ್ಯಕೀಯ ಕ್ಷೇತ್ರಕ್ಕೂ ಸವಾಲಾಗಿದೆ. ಹೀಗಾಗಿ 14 ದಿನಗಳ ನಿಗಾ ಅವಧಿಯನ್ನು 28 ದಿನಕ್ಕೆ ವಿಸ್ತರಿಸಲಾಗಿದೆ.

ಕೊರೊನಾ ಸೋಂಕು ಶಂಕೆ ಇರುವವರು ಹಾಗೂ ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್‌ ಕೇಂದ್ರಗಳಿಗೆ ದಾಖಲಿಸಿ, 14 ದಿನ ಅವರ ಮೇಲೆ ನಿಗಾ ಇಡಲಾಗುತ್ತದೆ. ಈ ಅವಧಿಯಲ್ಲಿ ಅವರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆ ಮಾಡಿ, ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಾಗ ಮನೆಗೆ ಕಳುಹಿಸಲಾಗುತ್ತದೆ. ನೂತನ ಮಾರ್ಗಸೂಚಿಯ ಪ್ರಕಾರ ಮನೆಗೆ ತೆರಳಿದ ಬಳಿಕವೂ 14 ದಿನ ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು. ಅಷ್ಟೇ ಅಲ್ಲ, ಆರೋಗ್ಯ ಕಾರ್ಯಕರ್ತರಿಗೆ ಪ್ರತಿನಿತ್ಯ ಮಾಹಿತಿಯನ್ನು ನೀಡಬೇಕು. ಇದೇ ರೀತಿ, ಚಿಕಿತ್ಸೆಯಿಂದ ಗುಣಮುಖರಾಗಿ ಮನೆಗೆ ತೆರಳಿದವರು ಕೂಡ ಮನೆಯಲ್ಲಿ ಪ್ರತ್ಯೇಕ ವಾಸ ಮಾಡಬೇಕು.

ರೋಗಿಗಳೊಂದಿಗೆ ಪರೋಕ್ಷ ಸಂಪರ್ಕ ಹೊಂದಿರುವವರನ್ನು ಮನೆಯಲ್ಲಿಯೇ ಪ್ರತ್ಯೇಕಿಸಲಾಗುತ್ತದೆ. ನಿಗಾ ಅವಧಿಯಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಕರ್ತವ್ಯನಿರತ ಅಧಿಕಾರಿಗಳಿಗೆ ಸೋಂಕು ತಗುಲಿದಲ್ಲಿ ಸರ್ಕಾರಿ ಕಚೇರಿಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಲೂ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಸೋಂಕು ಮುಕ್ತ ಜಿಲ್ಲೆಗಳು

ಚಾಮರಾಜನಗರ, ಚಿಕ್ಕಮಗಳೂರು,ಹಾಸನ, ಹಾವೇರಿ,ಕೋಲಾರ,ಕೊಪ್ಪಳ‌,ರಾಯಚೂರು, ರಾಮನಗರ,‌ಶಿವಮೊಗ್ಗ,ಯಾದಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.