ಮುಂಬೈ: ಕಾಂಗ್ರೆಸ್ ನೇತಾರ ರಾಧಾಕೃಷ್ಣ ವಿಖೆ ಪಾಟೀಲ್ ಮಹಾರಾಷ್ಟ್ರದ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪುತ್ರ ಸುಜಯ್ ವಿಖೆ ಪಾಟೀಲ್ ಬಿಜೆಪಿ ಸೇರಿರುವುದಿಂದ ವಿಖೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಂಗಳವಾರ ರಾಹುಲ್ ಗಾಂಧಿಯವರಿಗೆ ರಾಜೀನಾಮೆಪತ್ರ ಸಲ್ಲಿಸಿದ ವಿಖೆ, ಪಕ್ಷದ ಮುಖಂಡರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಸುಜಯ್ ಬಿಜೆಪಿಗೆ ಸೇರಿದ್ದಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೇ ಕಾರಣ ಎಂದು ವಿಖೆ ಆರೋಪಿಸಿದ್ದಾರೆ.
ಅಹ್ಮದಾನಗರ್ನಲ್ಲಿನ ಈಗಿನ ಪರಿಸ್ಥಿತಿಗೆ ನನ್ನ ಮಗನೇ ಕಾರಣ ಎಂದು ಹೇಳುತ್ತಿರುವುದು ತಪ್ಪು.ಶರದ್ ಪವಾರ್ ಅವರಂಥಾ ಹಿರಿಯ ನಾಯಕರು ಹಳೇ ವಿಷಯವನ್ನು ಕೆದಕಿ ತೀರಿ ಹೋದ ನನ್ನ ತಂದೆಯನ್ನು ಈ ವಿಷಯಗಳಿಗೆ ತಳುಕು ಹಾಕುತ್ತಿರುವುದು ಸರಿಯಲ್ಲ.ತಮ್ಮ ತಾತನ ವಿರುದ್ಧ ಈ ರೀತಿಯ ಹೇಳಿಕೆಗಳು ಕೇಳಿ ಬಂದಿದ್ದರಿಂದಲೇ ಸುಜಯ್ ಬಿಜೆಪಿ ಸೇರುವ ನಿರ್ಧಾರ ತೆಗೆದುಕೊಂಡಿರಬಹುದು ಎಂದಿದ್ದಾರೆ ವಿಖೆ.
ಏತನ್ಮಧ್ಯೆ, ತಾನು ಅಹ್ಮದಾನಗರ್ನಲ್ಲಿ ಮಗನ ವಿರುದ್ಧ ಚುನಾವಣಾ ಪ್ರಚಾರ ಮಾಡುವುದಿಲ್ಲ ಎಂದು ವಿಖೆ ಹೇಳಿದ್ದಾರೆ.
ಸುಜಯ್ ವಿಖೆ ಪಾಟೀಲ್ ಮಾರ್ಚ್ 12ರಂದು ಬಿಜೆಪಿ ಸೇರಿದ್ದರು.ಈ ಬಗ್ಗೆ ವಿಖೆ ಅವರ ನಿಲುವು ಏನು ಎಂದು ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಬಾಳಾ ಸಾಹೇಬ್ ಥೋರಟ್ ವಿಖೆ ಅವರಲ್ಲಿ ಒತ್ತಾಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.