ADVERTISEMENT

ಸಾರ್ವಭೌಮತೆಗೆ ಧಕ್ಕೆ ಸಹಿಸಲ್ಲ: ರಾಜನಾಥ್‌ ಸಿಂಗ್‌

ಚೀನಾಕ್ಕೆ ಸಂದೇಶ ರವಾನಿಸಿದ ರಕ್ಷಣಾ ಸಚಿವ ರಾಜನಾಥ್‌

ಪಿಟಿಐ
Published 10 ಸೆಪ್ಟೆಂಬರ್ 2020, 19:01 IST
Last Updated 10 ಸೆಪ್ಟೆಂಬರ್ 2020, 19:01 IST
   

ಅಂಬಾಲಾ: ‘ಗಡಿಯಲ್ಲಿ ಪ್ರಕ್ಷುಬ್ಧಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ವಾಯುಪಡೆಗೆ ರಫೇಲ್‌ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡುತ್ತಿರುವುದು ಮಹತ್ವದ ಕ್ರಮವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಇಲ್ಲಿನ ವಾಯುನೆಲೆಯಲ್ಲಿ ಐದು ರಫೇಲ್‌ ವಿಮಾನಗಳನ್ನು ಗುರುವಾರ ವಾಯಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿ, ಅವರು ಮಾತನಾಡಿದರು.

ಲಡಾಖ್‌ನ ಪೂರ್ವ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿರುವ ಕಾರಣ, ರಾಜನಾಥ್‌ ಸಿಂಗ್‌ ಅವರು ಈ ಕಾರ್ಯಕ್ರಮದ ವೇದಿಕೆ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.

ADVERTISEMENT

‘ರಾಷ್ಟ್ರದ ಭದ್ರತೆ, ದೇಶದ ಗಡಿಯ ರಕ್ಷಣೆಗೆ ಭಾರತ ಬದ್ಧ. ಹೀಗಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ದುಸ್ಸಾಹಸ ಮಾಡುತ್ತಿರುವವರಿಗೆ ಇದು ಪ್ರಬಲ ಸಂದೇಶವೂ ಹೌದು’ ಎಂದು ಹೇಳಿದರು.

‘ಇಂಡೊ–ಪೆಸಿಫಿಕ್‌ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಕ್ಷಣೆ ಸಹ ಭಾರತದ ಹೊಣೆಗಾರಿಕೆಯಾಗಿದೆ’ ಎಂದು ರಾಜನಾಥ್‌ ಹೇಳಿದರು.

‘ರಫೇಲ್‌ ಯುದ್ಧವಿಮಾನಗಳ ಸೇರ್ಪಡೆಯಿಂದ ಭಾರತದ ವಾಯುಪಡೆಗೆ ಆನೆಬಲ ಬಂದಂತಾಗಿದೆ’ ಎಂದುಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.