ADVERTISEMENT

ರಾಷ್ಟ್ರಧ್ವಜ ಖರೀದಿಸುವಂತೆ ಪಡಿತರ ಗ್ರಾಹಕರ ಮೇಲೆ ಒತ್ತಡ: ರಾಹುಲ್ ಗಂಭೀರ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2022, 14:02 IST
Last Updated 10 ಆಗಸ್ಟ್ 2022, 14:02 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ರಾಷ್ಟ್ರಧ್ವಜ ಖರೀದಿಸುವಂತೆ ಪಡಿತರ ಗ್ರಾಹಕರ ಮೇಲೆ ಅಂಗಡಿಯವರು ಒತ್ತಡ ಹೇರುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ ಹಂಚಿಕೊಂಡಿರುವ ಅವರು, ಬಿಜೆಪಿಯು ‘ರಾಷ್ಟ್ರೀಯತೆ’ಯನ್ನು ಮಾರಾಟ ಮಾಡುತ್ತಿದೆ. ಆ ಮೂಲಕ ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಟೀಕಿಸಿದ್ದಾರೆ.

‘ತ್ರಿವರ್ಣ ಧ್ವಜ ನಮ್ಮ ಹೆಮ್ಮೆ ಮತ್ತು ಅದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದೆ’ ಎಂದು ಹೇಳಿದ್ದಾರೆ.

ADVERTISEMENT

‘ರಾಷ್ಟ್ರೀಯತೆಯನ್ನು ಎಂದಿಗೂ ಮಾರಾಟ ಮಾಡಲು ಸಾಧ್ಯವಿಲ್ಲ. ಪಡಿತರ ನೀಡುವಾಗ ತ್ರಿವರ್ಣ ಧ್ವಜಕ್ಕಾಗಿ 20 ರೂಪಾಯಿ ನೀಡುವಂತೆ ಬಡವರಿಗೆ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ರಾಹುಲ್‌ ವಾಗ್ದಾಳಿ ನಡೆಸಿದ್ದಾರೆ.

‘ತ್ರಿವರ್ಣ ಧ್ವಜದ ಜೊತೆಗೆ, ಬಿಜೆಪಿ ಸರ್ಕಾರವು ನಮ್ಮ ದೇಶದ ಬಡವರ ಸ್ವಾಭಿಮಾನದ ಮೇಲೂ ದಾಳಿ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧ್ವಜ ಖರೀದಿಸಲು 20 ರೂಪಾಯಿ ನೀಡುವಂತೆ ಗ್ರಾಹಕರಿಕೆ ಬಲವಂತ ಮಾಡುತ್ತಿರುವ ವಿಡಿಯೊವೊಂದನ್ನು ರಾಹುಲ್‌ ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ, ಬಿಜೆಪಿ ಸಂಸದ ವರುಣ್ ಗಾಂಧಿ ಸಹ, ‘ರಾಷ್ಟ್ರಧ್ವಜ ಖರೀದಿಸುವಂತೆ ಪಡಿತರ ಗ್ರಾಹಕರ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದು ಆರೋಪಿಸಿದ್ದರು.

'ಹರ್‌ ಘರ್‌ ತಿರಂಗ' ಅಭಿಯಾನದಡಿ ಪ್ರತಿಯೊಬ್ಬರೂ ಆಗಸ್ಟ್‌ 13ರಿಂದ 15ರವರೆಗೆ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕೇಂದ್ರ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.