ನವದೆಹಲಿ: ಬಹುಮುಖ್ಯವಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವುದರ ಬದಲು ಸಶಸ್ತ್ರಪಡೆಗಳ ಸಮವಸ್ತ್ರದ ಬಗ್ಗೆ ಚರ್ಚಿಸಿ ಸಮಯ ಕಳೆಯಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸಮಿತಿ ಸಭೆಯಿಂದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಸಮಿತಿಯಲ್ಲಿದ್ದ ಇತರೆ ಕಾಂಗ್ರೆಸ್ ಸದಸ್ಯರು ಹೊರನಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾದ ಆಕ್ರಮಣ ಹಾಗೂ ಲಡಾಖ್ನಲ್ಲಿ ನಿಯೋಜಿಸಲ್ಪಟ್ಟ ಯೋಧರಿಗೆ ಸೂಕ್ತವಾದ ಉಪಕರಣಗಳ ವ್ಯವಸ್ಥೆಯ ಕುರಿತು ರಾಹುಲ್ ಗಾಂಧಿ ಅವರು ಪ್ರಸ್ತಾಪಿಸಿದಾಗ, ಸಮಿತಿಯ ಅಧ್ಯಕ್ಷರಾದ ಬಿಜೆಪಿಯ ಜುಆಲ್ ಓರಂ ಅವಕಾಶ ನೀಡಲಿಲ್ಲ ಎಂದು ಮೂಲಗಳು ಹೇಳಿವೆ.
ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಮ್ಮುಖದಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಯ ಸಮವಸ್ತ್ರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ ಅವರು ಈ ಕುರಿತು ಚರ್ಚಿಸುವುದರ ಬದಲು ರಾಜಕೀಯ ನಾಯಕತ್ವವು ರಾಷ್ಟ್ರೀಯ ಭದ್ರತೆಯ ಕುರಿತು ಚರ್ಚಿಸಬೇಕು ಹಾಗೂ ಲಡಾಖ್ನಲ್ಲಿ ಚೀನಾ ವಿರುದ್ಧ ಹೋರಾಡುತ್ತಿರುವ ಸೇನಾಪಡೆಯನ್ನು ಹೇಗೆ ಮತ್ತಷ್ಟು ಸದೃಢಗೊಳಿಸಬಹುದು ಎನ್ನುವುದರ ಬಗ್ಗೆ ಚರ್ಚಿಸಬೇಕು ಎಂದರು ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಸಮಿತಿಯ ಅಧ್ಯಕ್ಷರು ಅವಕಾಶ ನೀಡದೇ ಹೋದಾಗ, ರಾಹುಲ್ ಗಾಂಧಿ ಹಾಗೂ ಇತರೆ ಕಾಂಗ್ರೆಸ್ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.