ಕೊಟ್ಟಾಯಂ (ಕೇರಳ): ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ಕನಿಷ್ಠ ಆದಾಯ ಖಾತ್ರಿಪಡಿಸುವ ‘ನ್ಯಾಯ್’ ಯೋಜನೆಯನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಭರವಸೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಕಳೆದ 50 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಪುದುಪ್ಪಳ್ಳಿ ವಿಧಾನಸಭಾ ಕ್ಷೇತ್ರದ ಮಣ್ಣಾರ್ಕಾಡ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ದಕ್ಷಿಣದ ರಾಜ್ಯ ಕೇರಳದಲ್ಲಿ ನಮ್ಮ ಹೊಸ ಆಲೋಚನೆಯನ್ನು ಪರೀಕ್ಷಿಸುತ್ತಿದ್ದೇವೆ. ವರ್ಷಕ್ಕೆ ₹72,000 ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹೋಗುತ್ತದೆ. ಯೋಜನೆ ಜಾರಿಯಲ್ಲಿ ನನ್ನ ಸ್ವಾರ್ಥವೂ ಇದೆ’ ಎಂದು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಜನ್ಮತಳೆದ ನ್ಯಾಯ್ ಯೋಜನೆಯನ್ನು ನಿರ್ಣಾಯಕ ಎಂದು ಕರೆದಿರುವ ರಾಹುಲ್, ಬಡತನ ನಿರ್ಮೂಲನೆಯಲ್ಲಿ ಇದು ಆರಂಭಿಕ ಕೊಡುಗೆ ನೀಡುತ್ತದೆ ಎಂದು ವಿವರಿಸಿದರು. ಪಕ್ಷದ ಪ್ರಣಾಳಿಕೆಯಲ್ಲಿ ನ್ಯಾಯ್ ಪ್ರಸ್ತಾಪಿಸಿದ್ದರೂ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ಗೆ ಸಾಧ್ಯವಾಗಿರಲಿಲ್ಲ.
ಕೇರಳದಲ್ಲಿ ಈ ಯೋಜನೆ ಫಲ ನೀಡಿದಲ್ಲಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಯೋಜನೆ ಜಾರಿಗೊಳಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದ್ದಾರೆ. ‘ರಾಜ್ಯದಲ್ಲಿ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ಯೋಜನೆ ಜಾರಿ ಮಾಡಲಿದ್ದೇವೆ. ಈ ಮೂಲಕ ಬಡತನ ನಿರ್ಮೂಲನೆಯ ಹೋರಾಟದಲ್ಲಿ ಕೇರಳವು ಮಾದರಿಯಾಗಲಿದೆ’ ಎಂದರು.
ಚಾಂಡಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜೊತೆ ತೆರೆದ ವಾಹನದಲ್ಲಿ ರಾಹುಲ್ ಮೆರವಣಿಗೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.