ಪಟ್ನಾ(ಬಿಹಾರ): ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ದಾಖಲಿಸಿದ್ದಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಪಟ್ನಾ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.
10 ಸಾವಿರ ಶ್ಯೂರಿಟಿ ಹಣವನ್ನು ಪಡೆದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
‘ಆರ್ಎಸ್ಎಸ್ ಮತ್ತು ನರೇಂದ್ರ ಮೋದಿ ವಿರುದ್ಧ ಯಾರೇ ಮಾತನಾಡಿದರೂ, ದಾಳಿಗಳನ್ನು ಹಾಗೂ ಕೋರ್ಟ್ ಪ್ರಕರಣಗಳನ್ನು ಅವರು ಎದುರಿಸಬೇಕಾಗುತ್ತದೆ.ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ಹಾಗೂ ಬಡವರ, ರೈತರ, ಕಾರ್ಮಿಕರ ಪರವಾಗಿ ಹೋರಾಟ ಮಾಡಿದ್ದಕ್ಕಾಗಿ ನಾನು ಇಂದು ಇಲ್ಲಿದ್ದೇನೆ‘ ಎಂದು ರಾಹುಲ್ ಪ್ರತಿಕ್ರಿಯಿಸಿದರು.
ರಾಹುಲ್ ಗಾಂಧಿ ಏ.13ರಂದು ಕೋಲಾರದಲ್ಲಿ ನೀಡಿರುವ ಹೇಳಿಕೆಯಲ್ಲಿ, ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿ ವಿದೇಶಕ್ಕೆ ಹಾರಿರುವ ನೀರವ್ ಮೋದಿ, ಐಪಿಲ್ ಕ್ರಿಕೆಟ್ನ ಆಡಳಿತಾಧಿಕಾರಿಯಾಗಿದ್ದ ಲಲಿತ್ ಮೋದಿ, ರಫೇಲ್ ಯುದ್ಧವಿಮಾನ ಹಗರಣದ ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ಒಂದಿಲ್ಲೊಂದು ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ಎಲ್ಲಾ ಕಳ್ಳರ ಹೆಸರಿನ ಮುಂದೆ ಮೋದಿ ಎಂಬ ಸರ್ ನೇಮ್ ಇದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
‘ರಾಹುಲ್ ಗಾಂಧಿ ಅವರ ಈ ಹೇಳಿಕೆ ಮೋದಿ ಎಂಬ ಹೆಸರಿನವರ ಘನತೆಗೆ ಸಾರ್ವಜನಿಕರ ಹಿತದೃಷ್ಟಿಯಲ್ಲಿ ಕುಂದುಂಟು ಮಾಡುತ್ತದೆ. ಆದ್ದರಿಂದ ಅವರನ್ನು ಕರೆಸಿ ವಿಚಾರಣೆ ನಡೆಸಬೇಕು’ ಎಂದು ಸುಶೀಲ್ ಮೋದಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.