ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೊ ಯಾತ್ರೆ'ಯು ಶುಕ್ರವಾರಆಂಧ್ರ ಪ್ರದೇಶವನ್ನು ಪ್ರವೇಶಿಸಲಿದೆ.
ಚಿತ್ರದುರ್ಗದ ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಬೆಂಬಲಿಗರ ಜೊತೆ ರಾಹುಲ್ ಗಾಂಧಿ ಶುಕ್ರವಾರ ಬೆಳಿಗ್ಗೆ ಕಾಲ್ನಡಿಗೆ ಆರಂಭಿಸಿದ್ದಾರೆ.
'ಭಾರತ್ ಜೋಡೊ ಯಾತ್ರೆ ಹೋದಲೆಲ್ಲ ಪ್ರೀತಿಯ ಮಹಾಪೂರವೇ ಹರಿದು ಬರುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕದಲ್ಲೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮತ್ತೊಂದು ಮೈಲುಗಲ್ಲಾಗುವ ದಿನ ನಮ್ಮ ಮುಂದಿದೆ. ಆಂಧ್ರ ಪ್ರದೇಶದಲ್ಲಿನ ನಮ್ಮ ಚುಟುಕು ಯಾತ್ರೆಯಲ್ಲಿ ಪಾಲ್ಗೊಳ್ಳಿ' ಎಂದು ಭಾರತ್ ಜೋಡೊ ಯಾತ್ರೆ ತಂಡ ಟ್ವೀಟ್ ಮಾಡಿದೆ.
ಆಂಧ್ರ ಪ್ರದೇಶದಲ್ಲಿ ನಡೆಯುವ ಒಂದು ದಿನದ ಯಾತ್ರೆ ಇದಾಗಿದ್ದು, ಸಂಜೆ ಕರ್ನಾಟಕಕ್ಕೆ ವಾಪಸ್ ಆಗಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಜಜಿರಾಕಲ್ಲು ಟೋಲ್ ಪ್ಲಾಜಾದ ಮೂಲಕ ರಾಹುಲ್ ಗಾಂಧಿ ಅವರು ಆಂಧ್ರ ಪ್ರದೇಶವನ್ನು ಪ್ರವೇಶಿಸಲಿದ್ದಾರೆ.ಸಂಜೆ 4.30ರ ವೇಳೆಗೆ ಒಬಲಾಪುರಂಗೆ ಪ್ರಯಾಣ ಬೆಳೆಸಲಿದ್ದಾರೆಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕರ್ನಾಟಕಕ್ಕೆ ವಾಪಸ್ ಆಗುವ ರಾಹುಲ್ ಗಾಂಧಿ ಬಳ್ಳಾರಿಯ ಹಲಕುಂದಿ ಮಠದಲ್ಲಿ ರಾತ್ರಿ ತಂಗಲಿದ್ದಾರೆ.
ಸೆಪ್ಟೆಂಬರ್ 30ರಂದು ಕರ್ನಾಟಕ ಪ್ರವೇಶಿಸಿರುವ ಯಾತ್ರೆಯು ಅಕ್ಟೋಬರ್ 20ರಂದು ನಿರ್ಗಮಿಸಲಿದೆ. ಈ ಮಧ್ಯೆ ರಾಜ್ಯದಲ್ಲಿ 21 ದಿನಗಳಲ್ಲಿ 511 ಕಿ.ಮೀ.ಯನ್ನು ಯಾತ್ರೆ ಕ್ರಮಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.