ರಾಹುಲ್ ಗಾಂಧಿ
– ಪಿಟಿಐ ಚಿತ್ರ
ನವದೆಹಲಿ: ‘ನರೇಂದ್ರ ಮೋದಿ ಭಯಭೀತರಾಗಿದ್ದಾರೆ. ಅವರ ಮೇಲಿದ್ದ ಎರಡು ಒತ್ತಡಗಳಿಂದಾಗಿ ಭಾರತ ಹಾಗೂ ಅಮೆರಿಕ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ’ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.
‘ನರೇಂದ್ರ ಮೋದಿ ಇಮೇಜ್ ಸೃಷ್ಟಿಸಿದ ಜನರೇ ಇಂದು ಅದನ್ನು ಸ್ಫೋಟಿಸಲು ಪ್ರಾರಂಭಿಸಿದ್ದಾರೆ. ಅಮೆರಿಕದಲ್ಲಿ ಅದಾನಿ ವಿರುದ್ಧ ಒಂದು ಪ್ರಕರಣವಿದೆ. ಮತ್ತೊಂದು ಇನ್ನೂ ಬಹಿರಂಗಗೊಳ್ಳದ ಎಪ್ಸ್ಟೀನ್ ಫೈಲ್ ಈ ಎರಡು ಕಾರಣಗಳಿಗಾಗಿಯೇ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಆಗಿದೆ’ ಎಂದು ರಾಹುಲ್ ಗಾಂಧಿ ದೂರಿದರು.
ಸಂಸತ್ತಿನ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ‘ಪ್ರಧಾನಿ ನರೇಂದ್ರ ಮೋದಿಯವರು ರಾಜಿ ಮಾಡಿಕೊಂಡಿದ್ದಾರೆ ಮತ್ತು ಸಾವಿರಾರು ಕೋಟಿಗಳಿಂದ ಸೃಷ್ಟಿಸಿರುವ ಅವರ ಇಮೇಜ್ ಬಲೂನ್ನಂತೆ ಸಿಡಿಯಬಹುದು’ ಎಂದು ಹೇಳಿದರು.
‘ಮೋದಿಯವರು ಭಯಭೀತರಾಗಿದ್ದಾರೆ. ಕಳೆದ 4 ತಿಂಗಳಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ಒಪ್ಪಂದದಲ್ಲಿ ಏನೂ ಬದಲಾವಣೆಯಾಗಿಲ್ಲ. ಆದರೆ, ನನಗೆ ಗೊತ್ತಿರದ ಮತ್ತು ಅವರಿಗೆ ತಿಳಿದಿರುವ ಯಾವುದೋ ಉದ್ದೇಶಕ್ಕಾಗಿ ನಿನ್ನೆ ಸಂಜೆ ಅಮೆರಿಕ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’ ಎಂದರು.
ಇನ್ನೂ ಇದಾದ ಬಳಿಕ, ರಾಹುಲ್ ಗಾಂಧಿಯವರಿಗೆ ಮಾತನಾಡಲು ಬಿಡದಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ, ಕಾಗದ ಹರಿದು ಘೋಷಣೆ ಕೂಗಿದ್ದ ವಿರೋಧ ಪಕ್ಷದ 8 ಜನ ಸಂಸದರನ್ನು ಅಮಾನತುಗೊಳಿಸಲಾಗಿದೆ.
ಹಂಗಾಮಿ ಸಭಾಧ್ಯಕ್ಷರಾಗಿದ್ದ ಬಿಜೆಪಿಯ ದಿಲೀಪ್ ಸೈಕಿಯಾ ಅವರು 8 ಸಂಸದರನ್ನು ಹೆಸರಿಸಿದರು. ನಂತರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ಸಂಸದರಾದ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಗುರ್ಜೀತ್ ಸಿಂಗ್ ಔಜ್ಲಾ, ಹಿಬಿ ಈಡನ್, ಡೀನ್ ಕುರಿಯಾಕೋಸ್, ಪ್ರಶಾಂತ್ ಪಡೋಲೆ, ಸಿ. ಕಿರಣ್ ಕುಮಾರ್ ರೆಡ್ಡಿ, ಮಾಣಿಕ್ಕಂ ಟ್ಯಾಗೋರ್ ಮತ್ತು ಸಿಪಿಐ(ಎಂ) ಸಂಸದ ಎಸ್. ವೆಂಕಟೇಶನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಈ ಪ್ರಸ್ತಾವನೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.