ADVERTISEMENT

ಅಮೃತಸರ: ಸ್ವರ್ಣ ಮಂದಿರದಲ್ಲಿ ನೀರಿನ ಬಟ್ಟಲು ತೊಳೆದ ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 13:14 IST
Last Updated 2 ಅಕ್ಟೋಬರ್ 2023, 13:14 IST
ಪಂಜಾಬ್‌ನ ಅಮೃತಸರದ ಸ್ವರ್ಣ ಮಂದಿರಕ್ಕೆ ಸೋಮವಾರ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಭಕ್ತರು ಬಳಸಿದ ನೀರಿನ ಬಟ್ಟಲುಗಳನ್ನು ಶುಚಿಗೊಳಿಸುವ ಮೂಲಕ ಸೇವೆ ಸಲ್ಲಿಸಿದರು –ಪಿಟಿಐ ಚಿತ್ರ
ಪಂಜಾಬ್‌ನ ಅಮೃತಸರದ ಸ್ವರ್ಣ ಮಂದಿರಕ್ಕೆ ಸೋಮವಾರ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಭಕ್ತರು ಬಳಸಿದ ನೀರಿನ ಬಟ್ಟಲುಗಳನ್ನು ಶುಚಿಗೊಳಿಸುವ ಮೂಲಕ ಸೇವೆ ಸಲ್ಲಿಸಿದರು –ಪಿಟಿಐ ಚಿತ್ರ   

ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಇರುವ ಸ್ವರ್ಣ ಮಂದಿರಕ್ಕೆ (ಗೋಲ್ಡನ್‌ ಟೆಂಪಲ್‌) ಸೋಮವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿದರು.

ತಲೆಗೆ ನೀಲಿ ಬಣ್ಣದ ಕರವಸ್ತ್ರ ಸುತ್ತಿದ್ದ ಅವರು ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಿಖ್‌ ಸಮುದಾಯದ ಉನ್ನತಾಧಿಕಾರ ಕೇಂದ್ರವಾದ ಅಕಲ್‌ ತಖ್ತ್‌ಗೆ ಭೇಟಿ ನೀಡಿದರು. ನಂತರ ಭಕ್ತರು ಬಳಸಿದ ನೀರಿನ ಬಟ್ಟಲುಗಳನ್ನು ಸ್ವಯಂಪ್ರೇರಿತರಾಗಿ ಶುಚಿಗೊಳಿಸುವ ಮೂಲಕ ಸೇವೆ ಸಲ್ಲಿಸಿದರು. 

ರಾಹುಲ್‌ ಅವರು ಮಂಗಳವಾರವೂ ಸ್ವರ್ಣ ಮಂದಿರಕ್ಕೆ ಭೇಟಿ ನೀಡುವ ನಿರೀಕ್ಷೆಯಿದ್ದು, ಪಾಲ್ಕಿ ಸೇವೆ ಸಲ್ಲಿಸಲಿದ್ದಾರೆ.‌ ಇದು ಅವರ ಖಾಸಗಿ ಭೇಟಿಯಾದ್ದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಭೇಟಿಗೆ ಅವಕಾಶ ನಿರಾಕರಿಸಲಾಗಿತ್ತು.  

ADVERTISEMENT

ರಾಹುಲ್‌ ಅವರು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಸಚ್ಖಂಡ್ ಶ್ರೀ ಹರ್ಮಂದಿರ್ ಸಾಹಿಬ್‌ಗೆ ನಮನ ಸಲ್ಲಿಸಲಿದ್ದಾರೆ. ಅವರ ಖಾಸಗಿತನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಪಕ್ಷದ ಜವಾಬ್ದಾರಿ. ಹಾಗಾಗಿ, ಕಾರ್ಯಕರ್ತರು ಅವರನ್ನು ಭೇಟಿ ಮಾಡಲು ಬರಬಾರದು ಎಂದು ಪಂಜಾಬ್‌ನ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ ಮನವಿ ಮಾಡಿದ್ದರು.

2015ರ ಡ್ರಗ್ಸ್‌ ಪ್ರಕರಣದಲ್ಲಿ ಪಂಜಾಬ್‌ನ ಕಾಂಗ್ರೆಸ್‌ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರ ಬಂಧನವಾಗಿದೆ. ಇದು ಎಎಪಿ ಸೇಡಿನ ರಾಜಕೀಯದ ಭಾಗವೆಂದು ಕಾಂಗ್ರೆಸ್‌ ಆರೋಪಿಸಿದೆ. ಮತ್ತೊಂದೆಡೆ 2024ರ ಲೋಕಸಭಾ ಚುನಾವಣೆಯಲ್ಲಿ ಎಎಪಿ ಜೊತೆ ಮೈತ್ರಿಗೆ ಪಂಜಾಬ್‌ನ ಕೈ ಪಾಳಯದ ನಾಯಕರು ಅಪಸ್ವರ ಎತ್ತಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕನ ಭೇಟಿ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.