ADVERTISEMENT

ಕೇಂದ್ರದ ಕೋವಿಡ್ ನಿರ್ವಹಣೆ ‘ವಿನಾಶಕಾರಿ‘: ‘ಶ್ವೇತಪತ್ರ‘ ಬಿಡುಗಡೆ ಮಾಡಿದ ರಾಹುಲ್

ಪಿಟಿಐ
Published 22 ಜೂನ್ 2021, 8:48 IST
Last Updated 22 ಜೂನ್ 2021, 8:48 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆ ಕುರಿತು ಕಾಂಗ್ರೆಸ್‌ ಮಂಗಳವಾರ ‘ಶ್ವೇತ ಪತ್ರ‘ ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದನ್ನು ಬಿಡುಗಡೆ ಮಾಡಿದ್ದು, ಮೂರನೇ ಅಲೆಯನ್ನು ಸಮರ್ಪಕವಾಗಿ ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಕೋವಿಡ್‌‘ನ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ವಹಣೆ ‘ವಿನಾಶಕಾರಿ‘ಯಾಗಿರುವುದು ಸ್ಪಷ್ಟವಾಗಿದೆ. ಅದು ಯಾವ ರೀತಿ ವಿನಾಶಕಾರಿಯಾಗಿದೆ, ಸರ್ಕಾರ ಎಲ್ಲೆಲ್ಲಿ ಎಡವಿದೆ, ಎಂಬುದನ್ನು ಈ ಶ್ವೇತಪತ್ರದಲ್ಲಿ ಎತ್ತಿ ತೋರಿಸಲು ಪ್ರಯತ್ನಿಸಿದ್ದೇವೆ‘ ಎಂದು ರಾಹುಲ್‌ ಗಾಂಧಿ ಹೇಳಿದರು.

ಕೋವಿಡ್ ನಿರ್ವಹಣೆಯಲ್ಲಿ ಏನು ತಪ್ಪಾಗಿದೆ ಎಂಬುದರ ಕುರಿತು ಸರ್ಕಾರಕ್ಕೆ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವುದು ನಮ್ಮ ಉದ್ದೇಶ ಎಂದು ಹೇಳಿದ ರಾಹುಲ್, 'ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವುದಷ್ಟೇ ನಮ್ಮ ಉದ್ದೇಶವಲ್ಲ. ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಮೂರನೇ ಅಲೆ ಎದುರಿಸಲು ಸಿದ್ಧವಾಗಲು ಸಹಾಯ ಮಾಡುವುದು ಈ ಶ್ವೇತಪತ್ರದ ಉದ್ದೇಶವಾಗಿದೆ‘ ಎಂದು ಹೇಳಿದರು.

ADVERTISEMENT

‌ಕೋವಿಡ್ ವಿರುದ್ಧ ಹೋರಾಡುವುದಕ್ಕಿರುವ ಏಕೈಕ ಪ್ರಮುಖ ಅಸ್ತ ಲಸಿಕೆ ಎಂದು ಪ್ರತಿಪಾದಿಸಿದ ಅವರು, ‘ಸಾಧ್ಯವಾದಷ್ಟು ಬೇಗ ಶೇ 100 ರಷ್ಟು ಲಸಿಕೆ ಗುರಿಯನ್ನು ತಲುಪಬೇಕು‘ ಎಂದು ಒತ್ತಾಯಿಸಿದರು.

ಕೋವಿಡ್‌ 19 ಲಸಿಕೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ‍ಪಕ್ಷಪಾತ ಮಾಡದೆ ಎಲ್ಲ ರಾಜ್ಯಗಳನ್ನು ಸಮವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.