ನವದೆಹಲಿ (ಪಿಟಿಐ): ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್ನಲ್ಲಿ ಶುಕ್ರವಾರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಪಟ್ನಾಕ್ಕೆ ಬಂದಿಳಿಯಬೇಕಾಗಿದ್ದ ಅವರು ಮರಳಿ ದೆಹಲಿಗೆ ಪ್ರಯಾಣಿಸುವಂತಾಯಿತು. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ.
‘ನಾವು ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿರುವುದರಿಂದ ಮರಳಿ ದೆಹಲಿಗೆ ಬಂದಿದ್ದೇವೆ. ಆದ್ದರಿಂದ ಸಮಷ್ಟಿಪುರ (ಬಿಹಾರ), ಬಾಲಸೋರ್ (ಒರಿಸ್ಸಾ) ಹಾಗೂ ಸಂಗಮ್ನೇರ್ದಲ್ಲಿ (ಮಹಾರಾಷ್ಟ್ರ) ಆಯೋಜಿಸಿದ್ದ ಸಭೆಗಳು ತಡವಾಗಿ ನಡೆಯಲಿವೆ. ಅದಕ್ಕಾಗಿ ವಿಷಾದಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು ಟ್ವೀಟ್ ಜೊತೆಗೆ ವಿಮಾನದ ವಿಡಿಯೊವನ್ನೂ ಟ್ಯಾಗ್ ಮಾಡಿದ್ದರು.
‘ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 10 ಜನರಿದ್ದರು. ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿದಿದೆ. ನಿಯಮಾನುಸಾರ ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಡಿಜಿಸಿಎ ಹೇಳಿದೆ. ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನವು ದೆಹಲಿಯ ‘ಫೋರಂ–1 ಏವಿಯೇಶನ್ ಪ್ರೈ.ಲಿ.’ ಕಂಪನಿಗೆ ಸೇರಿದ್ದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.