
ನವದೆಹಲಿ: ನಿವೃತ್ತ ಅಧಿಕಾರಿಗಳಿಗೆ ಚಿನ್ನ ಲೇಪಿತ ಬೆಳ್ಳಿ ಪದಕ ನೀಡುವ ಸಂಪ್ರದಾಯವನ್ನು ರೈಲ್ವೆ ಸಚಿವಾಲಯವು ಬುಧವಾರದಿಂದ ಕೈಬಿಟ್ಟಿದೆ.
‘ಈಗಾಗಲೇ ಸಂಗ್ರಹಿಸಿರುವ/ ಲಭ್ಯವಿರುವ ಬೆಳ್ಳಿಯ ಪದಕಗಳನ್ನು ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು’ ಎಂದು ಸಚಿವಾಲಯವು ರೈಲ್ವೆಯ ವಲಯ ಮುಖ್ಯಸ್ಥರು ಮತ್ತು ಉತ್ಪಾದನಾ ಘಟಕಗಳ ಮುಖ್ಯಸ್ಥರಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಆದರೆ ಬೆಳ್ಳಿ ಪದಕ ನೀಡುವ ಸಂಪ್ರದಾಯವನ್ನು ಕೈಬಿಟ್ಟಿರುವುದಕ್ಕೆ ಕಾರಣವನ್ನು ಅದು ನೀಡಿಲ್ಲ.
ಆದರೆ, ಹೊರಗುತ್ತಿಗೆ ಮಾರಾಟಗಾರರು ಪೂರೈಕೆ ಮಾಡುವ ಪದಕಗಳ ಗುಣಮಟ್ಟ ಕಳಪೆಯಾಗಿರುತ್ತಿತ್ತು. ಬೆಳ್ಳಿಯ ಬೆಲೆ ಹೆಚ್ಚಾಗಿರುವ ಕಾರಣ ಇತರೆ ವೆಚ್ಚವನ್ನು ಕಡಿತ ಮಾಡಲಾಗುತ್ತಿತ್ತು. ಈ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.
ಪದಕವು ಶೇಕಡ 99.9ರಷ್ಟು ಪರಿಶುದ್ಧತೆಯ 20 ಗ್ರಾಂ ಬೆಳ್ಳಿಯನ್ನು ಒಳಗೊಂಡಿರುತ್ತಿತ್ತು.
‘ಕೆಲವು ಪ್ರಕರಣಗಳಲ್ಲಿ ಮಾರಾಟಗಾರರು ಪೂರೈಸಿದ್ದ ಪದಕಗಳು ಕಳಪೆ ಗುಣಮಟ್ಟದ್ದಾಗಿದ್ದವು ಅಥವಾ ನಕಲಿ ಆಗಿದ್ದವು. ಹೀಗಾಗಿ ಪದಕ ನೀಡುವ ಸಂಪ್ರದಾಯವನ್ನೇ ಕೈಬಿಡಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.