ಮುಂಬೈ: ನಿಲ್ದಾಣಗಳ ವಿಶ್ರಾಂತಿ ಕೊಠಡಿಗಳಲ್ಲಿ ಜನರು ಇರಬಹುದಾದ ಅವಧಿಯನ್ನು ವಿಸ್ತರಿಸುವಂತೆ ಎಲ್ಲ ನಿಲ್ದಾಣಗಳ ಅಧಿಕಾರಿಗಳಿಗೆ ರೈಲ್ವೆ ಇಲಾಖೆಯು ನಿರ್ದೇಶನ ನೀಡಿದೆ. ಕೊರೊನಾ ಸೋಂಕು ಕಾರಣದಿಂದಾಗಿ ರೈಲು ಸೇವೆ ರದ್ದಾದ ಕಾರಣ ಜನರಿಗೆ ತೊಂದರೆ ಆಗಬಾರದು ಎಂದು ಈ ನಿರ್ಧಾರಕ್ಕೆ ಬರಲಾಗಿದೆ.
ಕನಿಷ್ಠ ಮೂರು ತಾಸಿನಿಂದ ಗರಿಷ್ಠ 48 ತಾಸುಗಳ ಅವಧಿಗೆ ವಿಶ್ರಾಂತಿ ಕೊಠಡಿಯನ್ನು ಕಾಯ್ದಿರಿಸಬಹುದು.
ಒಂದೆರಡು ದಿನಗಳ ಬಳಿಕ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ ಜನರು ನಿಲ್ದಾಣಗಳಲ್ಲಿ ಇದ್ದಾರೆ. ಆದರೆ, ರೈಲುಗಳು ರದ್ದಾದ ಕಾರಣ ಅವರು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಅವರು ಬೇರೆ ಎಲ್ಲಿಗೂ ಹೋಗುವ ಹಾಗೆಯೂ ಇಲ್ಲ. ಆದ್ದರಿಂದ, ಈ ಕ್ರಮ ಕೈಗೊಳ್ಳಲಾಗಿದೆ.
ವಿಮಾನದಲ್ಲಿ ಅಂತರಕ್ಕೆ ಕ್ರಮ
ವಿಮಾನ ಪ್ರಯಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಹಲವು ಕ್ರಮಗಳನ್ನು ಪ್ರಕಟಿಸಿದೆ.
ಇಬ್ಬರು ಪ್ರಯಾಣಿಕರ ನಡುವೆ ಒಂದು ಆಸನವನ್ನು ಖಾಲಿ ಬಿಡಬೇಕು, ಚೆಕ್ ಇನ್ ಕೌಂಟರ್ಗಳ ಸರತಿ ಸಾಲಿನಲ್ಲಿ ಇಬ್ಬರ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಚೆಕ್ ಇನ್ ಕೌಂಟರ್ಗಳ ನಡುವೆ ಕೂಡ ಅಂತರ ಇರಬೇಕು, ಚೆಕ್ ಇನ್ ಮತ್ತು ಭದ್ರತಾ ತಪಾಸಣೆ ಸಂದರ್ಭದಲ್ಲಿ ಪ್ರಯಾಣಿಕರಿಗೆ ನೆರವು ನೀಡಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.