ಜೈಪುರ: 2014ರಿಂದ 2018ರ ನಡುವೆ ರಾಜಸ್ಥಾನದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಎಲ್ಲ ರೀತಿಯ ಸಾಲಗಳನ್ನೂ ಮನ್ನಾ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು, ರಾಜ್ಯದಲ್ಲಿ ಬೆಳೆಸಾಲ ಮನ್ನಾ ಸಾಧ್ಯಾಸಾಧ್ಯತೆ ಪರಿಶೀಲನೆಗಾಗಿ ರಚಿಸಲಾಗಿರುವ ಸಮಿತಿಯು ತೀರ್ಮಾನಿಸಿದೆ.
ನಗರಾಭಿವೃದ್ಧಿ ಸಚಿವ ಶಾಂತಿ ಧಾರಿವಾಲ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
‘ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 70 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಅಥವಾ ಇತರ ಯಾವುದೇ ಉದ್ದೇಶಕ್ಕೆ ಅವರು ಪಡೆದಿರುವ ಎಲ್ಲ ಸಾಲವನ್ನೂ ಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ತಿಳಿಸುತ್ತೇವೆ’ ಎಂದು ಧಾರಿವಾಲ್ ಹೇಳಿದ್ದಾರೆ.
‘ಇದು ಮುಖ್ಯಮಂತ್ರಿಗೆ ನಾವು ಮಾಡುತ್ತಿರುವ ಹಲವು ಶಿಫಾರಸುಗಳಲ್ಲಿ ಒಂದಾಗಿದೆ. ಇನ್ನುಳಿದಂತೆ, ಹಣಕಾಸಿನ ಹೊರೆಯ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದ್ದಾರೆ.
ಸಹಕಾರ ಬ್ಯಾಂಕುಗಳಿಂದ ರೈತರು ಪಡೆದ ಸಂಪೂರ್ಣ ಅಲ್ಪಾವಧಿ ಸಾಲ, ರಾಷ್ಟ್ರೀಕೃತ ಬ್ಯಾಂಕು ಮತ್ತು ಇತರ ಬ್ಯಾಂಕುಗಳಿಂದ ₹2 ಲಕ್ಷದವರೆಗೆ ಸಾಲ ಪಡೆದ ಸುಸ್ತಿದಾರ ರೈತರ ಸಾಲ ಮನ್ನಾ ಮಾಡುವುದಾಗಿ, ಸರ್ಕಾರ ರಚನೆ ಬಳಿಕ ಮುಖ್ಯಮಂತ್ರಿ ಗೆಹ್ಲೋಟ್ ಪ್ರಕಟಿಸಿದ್ದರು. ಆ ನಂತರ, ಇದಕ್ಕೆ ಪೂರಕವಾಗಿ ಸಮಿತಿ ರಚಿಸಲಾಗಿತ್ತು. ಜನವರಿ 11ರಂದು ಸಮಿತಿಯ ಮುಂದಿನ ಸಭೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.