ನವದೆಹಲಿ’ ದೇಶದ ಅಧಿಕಾರ ಕೇಂದ್ರವಾಗಿರುವ ದೆಹಲಿಯ ಲ್ಯುಟೆನ್ಸ್ ಪ್ರದೇಶವನ್ನು ಪುನರ್ ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರವು 2019ರಲ್ಲಿ ಪ್ರಕಟಿಸಿತು. ಸಂಸತ್ ಭವನ, ಪ್ರಧಾನಿ ಕಚೇರಿ, ಪ್ರಧಾನಿ ನಿವಾಸ, ಉಪರಾಷ್ಟ್ರಪತಿ ನಿವಾಸಗಳನ್ನು ಹೊಸದಾಗಿ ನಿರ್ಮಿಸುವುದು ಈ ಯೋಜನೆಯಲ್ಲಿ ಸೇರಿವೆ.
ಸಚಿವಾಲಯಗಳು ಮತ್ತು ಇಲಾಖೆಗಳ ಕಚೇರಿಗಳಿಗಾಗಿ ಇತರ ಕಟ್ಟಡಗಳನ್ನೂ ನಿರ್ಮಿಸಲಾಗುವುದು. ಇದು ₹20,000 ಕೋಟಿ ವೆಚ್ಚದ ಯೋಜನೆ.
ಇದರ ಭಾಗವಾಗಿ ರಾಜಪಥದ ಉದ್ದಕ್ಕೂ ಇರುವ ಸೆಂಟ್ರಲ್ ವಿಸ್ತಾ ಅವೆನ್ಯೂ ಪ್ರದೇಶವನ್ನೂ ನವೀಕರಿಸಲಾಗಿದೆ. ವಿಜಯ ಚೌಕದಿಂದ ಇಂಡಿಯಾ ಗೇಟ್ ವರೆಗಿನ ನವೀಕೃತ ಪ್ರದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ.
ಇನ್ನು ಕರ್ತವ್ಯಪಥ
ಸೆಂಟ್ರಲ್ ವಿಸ್ತಾದ ಪ್ರಮುಖ ಭಾಗವಾದ ರಾಜಪಥಕ್ಕೆ ‘ಕರ್ತವ್ಯಪಥ’ ಎಂದು ಮರುನಾಮಕರಣ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಉತ್ತರ ದೆಹಲಿ ಮಹಾನಗರ ಪಾಲಿಕೆಯು (ಎನ್ಡಿಎಂಸಿ) ನಿರ್ಣಯವನ್ನು ಈಗಾಗಲೇ ಅಂಗೀಕರಿಸಿದೆ.
ಸೆಂಟ್ರಲ್ ವಿಸ್ತಾ ಪ್ರದೇಶದಲ್ಲಿರುವ ಇಂಡಿಯಾ ಗೇಟ್ನಿಂದ ರಾಷ್ಟ್ರಪತಿ ಭವನದವರೆಗೆ ವ್ಯಾಪಿಸಿರುವ ರಸ್ತೆಯೇ ರಾಜಪಥ. ಗಣರಾಜ್ಯೋತ್ಸವದ ಪಥಸಂಚಲನ ನಡೆಯುವುದು ಇದೇ ರಾಜಪಥದಲ್ಲಿ. 1911ರಲ್ಲಿ ಬ್ರಿಟನ್ ರಾಜ 5ನೇ ಜಾರ್ಜ್ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಈ ರಸ್ತೆ, ಅದರ ಇಕ್ಕೆಲದಲ್ಲಿನ ಕೊಳ ಮತ್ತು ಹುಲ್ಲುಹಾಸನ್ನು ಅಭಿವೃದ್ಧಿಪಡಿಸಲಾಗಿತ್ತು. ಈ ಕಾರಣದಿಂದ ಈ ಮಾರ್ಗಕ್ಕೆ ಕಿಂಗ್ಸ್ವೇ ಎಂದು ಹೆಸರಿಡಲಾಗಿತ್ತು. ನಂತರದಲ್ಲಿ ಇದನ್ನು ರಾಜಪಥ ಎಂದು ಬದಲಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.