ದಂತಾ ರಾಮಗಡ (ರಾಜಸ್ಥಾನ): ರಾಜಸ್ಥಾನ ವಿಧಾನಸಭೆ ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಹಣಾಹಣಿ ನಡೆದಿರುವುದರ ನಡುವೆಯೇ ಅಲ್ಲಿ ತೃತೀಯ ರಂಗವೊಂದು ಸದ್ದಿಲ್ಲದೆ ರೂಪು ಪಡೆದುಕೊಂಡಿದೆ. ಏಳು ಪಕ್ಷಗಳ ಈ ಗುಂಪಿಗೆ ಬೆಂಕಿ ಮಾತಿನ ರೈತ ನಾಯಕ ಅಮ್ರಾ ರಾಮ್ ಮುಖ್ಯಮಂತ್ರಿ ಅಭ್ಯರ್ಥಿ.
ಎರಡು ಪಕ್ಷಗಳ ‘ವಿಭಜಿಸಿ, ಲೂಟಿ ಹೊಡೆದು ಆಳು’ವ ವ್ಯವಸ್ಥೆಯನ್ನು ಕೊನೆಗೊಳಿಸುವ ಕಾಲ ಬಂದಿದೆ ಎಂದು ರಾಮ್ ಹೇಳುತ್ತಾರೆ.
ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿಯಾಗಿಯೂ ರಾಮ್ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ತೃತೀಯ ರಂಗ ಮೈತ್ರಿಕೂಟವು ಎರಡೂ ಪಕ್ಷಗಳಿಗೆ ಕಠಿಣ ಸ್ಪರ್ಧೆ ಒಡ್ಡಲಿದೆ. ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರ ಹಿಡಿದ ಮಾದರಿಯಲ್ಲಿ ರಾಜಸ್ಥಾನದಲ್ಲಿ ತೃತೀಯ ರಂಗ ಮುನ್ನೆಲೆಗೆ ಬಂದರೆ ಆಶ್ಚರ್ಯವಿಲ್ಲ ಎಂದು ರಾಮ್ ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಐದೈದು ವರ್ಷ ಪರ್ಯಾಯವಾಗಿ ಲೂಟಿ ಹೊಡೆಯುವ ಪದ್ಧತಿ ಇದೆ. ಈ ಬಾರಿ ಬಿಜೆಪಿ ಖಂಡಿತವಾಗಿಯೂ ಸೋಲಲಿದೆ. ಆದರೆ, ಗೆಲುವು ಸಾಧಿಸಲು ಕಾಂಗ್ರೆಸ್ಗೆ ಸಾಧ್ಯವಾಗದು ಎಂದು ಅವರು ಭವಿಷ್ಯ ಹೇಳಿದ್ದಾರೆ.
ಏಳು ಪಕ್ಷಗಳ ಮೈತ್ರಿಕೂಟಕ್ಕೆ ಲೋಕತಾಂತ್ರಿಕ ಮೋರ್ಚಾ ಎಂದು ಹೆಸರಿಡಲಾಗಿದೆ. ಅದರಲ್ಲಿ ಸಿಪಿಎಂ, ಸಿಪಿಐ, ಸಿಪಿಐ (ಮಾರ್ಕ್ಸ್ವಾದಿ ಲೆನಿನ್ವಾದಿ), ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ ಮತ್ತು ಜನತಾ ದಳ (ಎಸ್) ಇವೆ.
ರಾಜಸ್ಥಾನ ವಿಧಾನಸಭೆಯಲ್ಲಿ ಎಡಪಕ್ಷಗಳ ಪ್ರಾತಿನಿಧ್ಯ ಈ ಬಾರಿ ದಾಖಲೆ ಎತ್ತರಕ್ಕೆ ಏರಲಿದೆ ಎಂಬ ಆಶಾವಾದ ರಾಮ್ ಅವರಲ್ಲಿದೆ. ಕಳೆದ ವರ್ಷ ರಾಜಸ್ಥಾನದಲ್ಲಿ ರೈತರ ಬೃಹತ್ ಸಮಾವೇಶವನ್ನು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಏರ್ಪಡಿಸಿತ್ತು. ರಾಮ್ ಅದರ ಉಪಾಧ್ಯಕ್ಷರು. ಸಮಾವೇಶದ ಬಳಿಕ ಕೆಲವು ದಿನ ಅವರನ್ನು ಜೈಲಿಗೂ ಹಾಕಲಾಗಿತ್ತು.
***
ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ರೈತರು, ಕಾರ್ಮಿಕರು, ಹಿಂದುಳಿದವರು ಎಲ್ಲರ ವಿರುದ್ಧವೂ ಕೆಲಸ ಮಾಡಿದೆ. ಚುನಾವಣೆಯಲ್ಲಿ ಕೊಟ್ಟ ಭರವಸೆ ಈಡೇರಿಲ್ಲ.
–ಅಮ್ರಾ ರಾಮ್, ಲೋಕತಾಂತ್ರಿಕ ಮೋರ್ಚಾದ ಮುಖ್ಯಮಂತ್ರಿ ಅಭ್ಯರ್ಥಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.